ಮಂಗಳೂರು: ಜಿಲ್ಲೆಯಲ್ಲಿ ಅಕ್ರಮವಾಗಿ ಗೋಮಾಂಸ ರವಾನೆ ಮತ್ತು ಗೋ ಹತ್ಯೆ ಮಾಡುವ ಮಾಫಿಯಾ ಕಾರ್ಯಾಚರಿಸುತ್ತಿದೆ. ಬಜರಂಗದಳ ಕಾರ್ಯಕರ್ತರು 2 ವಾರಗಳಿಂದ 4 ಕಡೆ ಅಕ್ರಮ ಗೋಮಾಂಸ ಸಾಗಾಟದ ಬಗ್ಗೆ ಮಾಹಿತಿ ನೀಡಿದ್ದು ಪೊಲೀಸರು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈ ಗೊಂಡಿಲ್ಲ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಕಡಿವಾಣ ಹಾಕಲು ಪೊಲೀಸರು ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್ ಒತ್ತಾಯಿಸಿದರು.
ಅವರು ಬುಧವಾರದಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಇತ್ತಿಚೆಗೆ ಪೊಲಿಸರು ಒಂದು ಟನ್ಗೂ ಹೆಚ್ಚು ಮಾಂಸ ವಶಪಡಿಸಿಕೊಂಡಿದ್ದಾರೆ. ಆದರೆ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇಅಲ್ಲದೆ ಮಂಗಳೂರಿನ ಕಸಾಯಿಖಾನೆಯನ್ನು ಪರಿಸರ ಇಲಾಖೆಯ ಆದೇಶದಂತೆ ಮುಚ್ಚಲಾಗಿದೆ. ಆದರೂ ಇಲ್ಲಿ 200ರಷ್ಟು ಬೀಫ್ ಸ್ಟಾಲ್ಗಳಿವೆ. ನಗರದ ಹೋಟೆಲ್ಗಳಲ್ಲಿ ಬೀಫ್ ಪದಾರ್ಥ ಸಿಗುತ್ತಿದ್ದು ಅವುಗಳನ್ನು ಗೋಮಾಂಸದಿಂದಲೇ ತಯಾರಿಸಿದ್ದೆಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಅವರಿಗೆ ಗೋಮಾಂಸ ಸರಬರಾಜು ಮಾಡಿದ್ದು ಯಾರು? ಎಂಬ ವಿಚಾರದ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಸುರತ್ಕಲ್, ಜೋಕಟ್ಟೆ, ತಣ್ಣೀರುಬಾವಿ, ಕುದ್ರೋಳಿ, ಫರಂಗಿಪೇಟೆ, ಸೂರಲ್ಪಾಡಿ, ಹಂಡೇಲು, ಕಾರ್ನಾಡು ಭಾಗಗಳಲ್ಲಿ ಗೋವುಗಳ ಹತ್ಯೆ ಮಾಂಸಕ್ಕಾಗಿ ನಡೆಯುತ್ತಿದೆ. ಜಿಲ್ಲೆಯ ಕಸಾಯಿಖಾನೆಗಳನ್ನು ಮುಟ್ಟುಗೋಲು ಹಾಕಬೇಕು. ಗೋವನ್ನು ಕದ್ದು ವಧಿಸಿದ್ದರೆ ಕೂಲಂಕಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.