ಮಂಗಳೂರು : ಕೊರೊನಾ ಲಸಿಕೆ ಕೊಡಿಸುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ ಮಾಡಿರುವ ಘಟನೆ ನಗರದ ಹೊರ ವಲಯದ ಮುಲ್ಕಿ ಪ್ರದೇಶದ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡು ಎಂಬಲ್ಲಿ ನಡೆದಿದೆ.
ರಾತ್ರೋರಾತ್ರಿ ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮ್ಯಾನೇಜರ್ ಕೊರೊನಾ ಲಸಿಕೆ ನೀಡುವುದಾಗಿ 85 ಮಹಿಳೆಯರನ್ನು, ತಮ್ಮ ಸಂಸ್ಥೆ ಬಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಗ್ರಾಮಸ್ಥರು ತಡರಾತ್ರಿ ಯಾವ ಲಸಿಕೆ ಕೊಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಾಗದೆ ಮ್ಯಾನೇಜರ್ ತಬ್ಬಿಬ್ಬಾಗಿದ್ದಾರೆ.

ಇದರ ಹಿಂದೆ ಖಾಸಗಿ ಮೆಡಿಕಲ್ ಕಾಲೇಜ್ ಗಳಲ್ಲಿ ನಡೆಯುವ ಬೆಡ್ ಭರ್ತಿ ದಂಧೆಯ ವಾಸನೆ ಹೊಡೆಯಲಾರಂಭಿಸಿದೆ, ಹೆಚ್ಚಾಗಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆಗೆಂದು ಭೇಟಿ ಕೊಡುವ ಪದ್ಧತಿ ಇದೆ . ಈ ಸಂದರ್ಭದಲ್ಲಿ ರೋಗಿಗಳು ಕಡಿಮೆ ಇದ್ದರೆ , ಅವರ ಕೆಲವೊಂದು ಮಾನ್ಯತೆ ಮತ್ತು ಅರ್ಹತೆಗಳು ಕೈ ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಖಾಸಗಿ ಮೆಡಿಕಲ್ ಕಾಲೇಜ್ ಗಳು ಕೂಲಿ ಕಾರ್ಮಿಕರನ್ನು ಒಟ್ಟು ಸೇರಿಸಿ ಬೆಡ್ ಭರ್ತಿ ಮಾಡಿ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ಕಸರತ್ತು ಇದೆ ಎಂಬ ಮಾಹಿತಿಯೊಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಲಿದೆ. ಈ ಘಟನೆಯ ಹಿಂದೆ ಕೂಡ ಇಂತಹುದೇ ಉದ್ದೇಶ ಇತ್ತೇ ಎಂಬ ಸಂಶಯ ಕಾಡಿದೆ.
ಘಟನೆ ಸಂಬಂಧ ಬಸ್ ಚಾಲಕ ಪ್ರವೀಣ್, ಆಸ್ಪತ್ರೆ ಮ್ಯಾನೇಜರ್ ನವಾಜ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.