ಉಡುಪಿ: ಕೆರೆಗೆ ಕಾರು ಬಿದ್ದು ಓರ್ವರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬಾರ್ಕೂರು ಚೌಳಿ ಕೆರೆ ಬಳಿ ನಡೆದಿತ್ತು. ಕೆರೆಗೆ ಬಿದ್ದ ಕಾರ್ನಲ್ಲಿದ್ದ ಉದ್ಯಮಿ ಸಂತೋಷ್ ಶೆಟ್ಟಿ ಎಂಬುವವರು ಕಾರಿನಲ್ಲೇ ಮೃತಪಟ್ಟಿದ್ದರು. ಇನ್ನು ಇದೇ ಕಾರ್ನಲ್ಲಿದ್ದ ಯುವತಿಯನ್ನು ಓರ್ವ ವಿದ್ಯಾರ್ಥಿನಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿದ್ದಾಳೆ.
ಲಿಟಲ್ರಾಕ್ ಶಾಲೆಯಲ್ಲಿ 10 ತರಗತಿ ಕಲಿಯುತ್ತಿರುವ ನಮನ ಬಹಳ ಚುರುಕಿನ ಹುಡುಗಿ. ಹಿರಿಯ ಉಪನ್ಯಾಸಕಿ, ಎನ್ಎಸ್ಎಸ್ ಅಧಿಕಾರಿ ಸವಿತಾ ಎರ್ಮಾಲ್ ಮತ್ತು ಕುಮಾರ್ ಅವರ ಸುಪುತ್ರಿ. ನಮನ ಅಪಘಾತ ಆದಾಗ ಅದೇ ಸ್ಥಳದಲ್ಲಿದ್ದರು. ತಕ್ಷಣ ಕಾರ್ಯಪ್ರವೃತ್ತಳಾಗಿ ಪ್ರಥಮ ಚಿಕಿತ್ಸೆ ನೀಡಿ, ಯುವತಿಯನ್ನು ಬದುಕಿಸುವಲ್ಲಿ ಶ್ರಮವಹಿಸಿದ್ದಳು.
ಶ್ವೇತಾಳನ್ನು ಮೇಲಕ್ಕೆ ಎತ್ತಿದ ತಕ್ಷಣ ಎದೆಗೆ ಒತ್ತಡ ಹಾಕಿ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ. ನೀರು ಕುಡಿದು ಎಚ್ಚರ ತಪ್ಪಿದ್ದ ಆ ಯುವತಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಯುವತಿಯ ಉಸಿರಾಟಕ್ಕೆ ತೊಂದರೆಯಾಗಿದ್ದ ನೀರನ್ನು ಪ್ರಥಮ ಚಿಕಿತ್ಸೆ ಮೂಲಕ ಹೊರ ಹಾಕಿದ ಬಳಿಕವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿದ್ಯಾರ್ಥಿನಿಯ ಧೈರ್ಯವಂತಿಕೆ, ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ. ಅಪಘಾತ ನಡೆದ ಬಳಿಕ ಮೊಬೈಲ್ನಲ್ಲಿ ವಿಡಿಯೋ ಫೋಟೊ ತೆಗೆದು ಸುಮ್ಮನಾಗುವ ಇಂತಹ ಕಾಲದಲ್ಲಿ ಯುವತಿಯ ಜೀವ ಉಳಿಸಿದ ವಿದ್ಯಾರ್ಥಿನಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.