ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವದ ಗುರುತು ಪತ್ತೆಯಾಗಿದೆ. ಮೈತದೇಹವನ್ನು ಬಂಟ್ವಾಳ ಪೊಲೀಸರು ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ. ಮಂಗಳೂರು ಕದ್ರಿ ರುದ್ರಭೂಮಿ ರಸ್ತೆ ನಿವಾಸಿ ಶ್ರೀರಂಗ ಐತಾಳ್ ಅವರ ಪತ್ನಿ ಸುಮತಿ ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಎಸ್.ಇ.ಝಡ್ ಪ್ಲಾಂಟ್ ಸಮೀಪದ ನೇತ್ರಾವತಿ ನದಿಯಲ್ಲಿ ಆ.9 ರಂದು ಬೆಳಿಗ್ಗೆ ತೇಲಾಡುವ ಸ್ಥಿತಿಯಲ್ಲಿ ಶವಪತ್ತೆಯಾಗಿತ್ತು.ಆರಂಭದಲ್ಲಿ ಅಪರಿಚಿತ ಶವ ನೇತ್ರಾವತಿ ನದಿಯಲ್ಲಿ ತೇಲಾತ್ತಿರುವುದನ್ನು ಗಮನಿಸಿದ ಬಂಟ್ವಾಳ ಹಿರಿಯ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಅವರು ಬಂಟ್ವಾಳ ಪೋಲೀಸರ ಗಮನಕ್ಕೆ ತಂದಿದ್ದರು.
ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಿದ ಪೋಲೀಸರು ಅಪರಿಚಿತ ಶವದ ಗುರುತು ಪತ್ತೆಗಾಗಿ ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು. ಪೋಲೀಸ್ ಮಾಹಿತಿ ಆಧರಿಸಿ ಮಹಿಳೆಯ ಮನೆಯವರು ಮಹಿಳೆಯ ಗುರುತು ಹಿಡಿದಿದ್ದಾರೆ. ಅದರಂತೆ ನಿನ್ನೆ ಬಂಟ್ವಾಳ ಪೋಲೀಸರ ಮುಖಾಂತರ ಶವವನ್ನು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ.
ಅ.3 ರಂದು ಸುಮತಿ ಅವರು ಮಧ್ಯಾಹ್ನ ಮನೆಯಿಂದ ಯಾರಿಗೂ ಹೇಳದೆ, ಮೊಬೈಲ್ ಮನೆಯಲ್ಲಿಟ್ಟು ಹೋದವರು ಮನೆಗೆ ವಾಪಸು ಬರದೆ ನಾಪತ್ತೆಯಾಗಿದ್ದರು, ಈ ಬಗ್ಗೆ ಕದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.