Saturday, June 28, 2025
Homeಕರಾವಳಿಮಾಣಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರ

ಮಾಣಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರ

spot_img
- Advertisement -
- Advertisement -

ಬಂಟ್ವಾಳ: ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಅಂಗನವಾಡಿ ಕೇಂದ್ರಗಳು ಇರುವ ತಾಲೂಕು ಬಂಟ್ವಾಳ. ಅಂಗನವಾಡಿಗಳ ಮೂಲಕ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲು ಸಾಧ್ಯವಾಗಿದೆ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.

ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಾಧಾರಣ ಕಡಿಮೆ ತೂಕ ಮತ್ತು ವಿಪರೀತ ಕಡಿಮೆ ತೂಕದ ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಕೆಲವಾರು ವರ್ಷಗಳ ಹಿಂದೆ ಪ್ರತೀ ಗ್ರಾಮಗಳಲ್ಲಿ ಆರೋಗ್ಯದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದ ಮಕ್ಕಳನ್ನು ಕಾಣುತ್ತಿದ್ದೆವು. ಸರ್ಕಾರದ ವಿಶೇಷ ಯೋಜನೆಗಳಿಂದ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಠಿಕ ಆಹಾರ ಹಾಗೂ ಮಕ್ಕಳಿಗೆ ನೀಡುವ ವಿವಿಧ ರೀತಿಯ ಲಸಿಕೆಗಳಿಂದ ಇದರ ನಿರ್ಮೂಲನೆ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯೆನಪೋಯ ಆಯುರ್ವೇದಿಕ್ ಕಾಲೇಜಿನ ವೈದ್ಯಾಧಿಕಾರಿ ಡಾ. ಲಕ್ಷ್ಮೀಶ ಉಪಾಧ್ಯಾಯರು ಮಾತನಾಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ತಾಯಿಯ ಹಾಲಿನ ಜೊತೆಗೆ ದನದ ಹಾಲು ಇತ್ಯಾದಿ ಪೌಷ್ಟಿಕಾಂಶ ಇರುವ ಆಹಾರವನ್ನೇ ನೀಡಬೇಕು ಹೊರತು ತಾಯಂದಿರು ತಮ್ಮ ಸುಲಭಕ್ಕಾಗಿ ಯಾವುದೇ ಅಪೌಷ್ಠಿಕ ಆಹಾರಗಳನ್ನು ನೀಡಬಾರದು ಎಂದು ಹೇಳಿದರು.

ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಶಶಿಕಲಾ ರವರು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ತೂಕ ಎತ್ತರ ನೋಡುವುದರಿಂದ ಅಪೌಷ್ಠಿಕತೆಯನ್ನು ಗುರುತಿಸಿ ಆ ಮಕ್ಕಳ ಭೌತಿಕ ಬೆಳವಣಿಗೆ ಮಾಡಲು ಜಂಟಿ ಇಲಾಖೆಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ.ಡಿ, ಇಡ್ಕಿದು ವಲಯ ಮೇಲ್ವಿಚಾರಕಿ ರೂಪಕಲಾ, ಯೆನಪೋಯ ಆಯುರ್ವೇದಿಕ್ ಕಾಲೇಜಿನ ಶಿಬಿರ ಸಂಯೋಜಕರಾದ ಅಬ್ದುಲ್ ರಝಾಕ್, ಸಿಬ್ಬಂದಿಗಳಾದ ಅನ್ವರ್, ಧನುಶ್ರೀ, ಪ್ರಸಾದ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.

ಮಾಣಿ ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಟ್ಲ ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರಿಂಗಾಣ ಯೆನಪೋಯ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. 45 ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಔಷಧಿ ನೀಡಲಾಯಿತು.

- Advertisement -
spot_img

Latest News

error: Content is protected !!