ಮಂಗಳೂರು: ಕೊರೋನಾ ಸಂಧಿಗ್ಧ ಪರಿಸ್ಥಿತಿಯಲ್ಲಿ ಕುಟುಂಬದ ಒಂದೊತ್ತು ಊಟಕ್ಕೂ ಕಷ್ಟ ಪಡುತ್ತಿರುವ ಈ ಸಂದರ್ಭದಲ್ಲಿ, ಪೋಷಕರ ಬಡತನವನ್ನೇ ಅಸ್ತ್ರವಾಗಿಸಿಕೊಂಡಿರುವ ಯೇನಪೋಯ ಶಾಲಾಡಳಿತ ಮಂಡಳಿ, ಮುಂಬೈ ಮೂಲದ ಫೈನಾನ್ಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಪೋಷಕರಿಗೆ ಸಾಲ ನೀಡುತ್ತಿದೆ. ಈ ಮೂಲಕ ಪೋಷಕರನ್ನು ಇನ್ನಷ್ಟು ಕಷ್ಟದ ಕೂಪಕ್ಕೆ ದೂಡುತ್ತಿರುವುದು ಸುಳ್ಳಲ್ಲ.
ಫೈನಾನ್ಸ್ ಪೀರ್ ಎನ್ನುವ ಫೈನಾನ್ಸ್ ಸಂಸ್ಥೆಯೊಂದಿಗೆ ಡೀಲ್ ಮಾಡಿರುವ ಏನಪೋಯ ಶಾಲಾಡಳಿತ, ಫೈನಾನ್ಸ್ ನಿಂದ ಶಿಕ್ಷಣ ಸಾಲ ತೆಗೆಯುವಂತೆ ಪೋಷಕರಿಗೆ ನಿರಂತರ ಕರೆ ಬರುತ್ತಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಕೇಸ್ ಗಳಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಚಿಂತನೆ ನಡೆಸಿಲ್ಲ. ಶಾಲಾರಂಭ ಆಗದಿದ್ದರೂ, ಸದ್ಯಕ್ಕೆ ಆಗುವ ಲಕ್ಷಣ ಇಲ್ಲದಿದ್ದರೂ ಸಂಸ್ಥೆ ಮಾತ್ರ ಈಗಲೇ ಶುಲ್ಕ ಕಟ್ಟುವಂತೆ ವರಸೆ ಆರಂಭಿಸಿದೆ. ಪೋಷಕರ ಪರಿಸ್ಥಿತಿ ಹೇಗೆ ಬೇಕಾದರೂ ಇರಲಿ, ತಮ್ಮ ಸಂಸ್ಥೆಯ ತಿಜೋರಿ ತುಂಬಿದರೆ ಸಾಕು ಎನ್ನುವ ಯೋಚನೆ ಸಂಸ್ಥೆಯ ಆಡಳಿತ ಮಂಡಳಿಯದ್ದಾಗಿದೆ. ಅದಕ್ಕಾಗಿ ಹೊಸತೊಂದು ಮಾಸ್ಟರ್ ಪ್ಲ್ಯಾನ್ ರೂಪಿಸಿರುವ ಸಂಸ್ಥೆ, ಮುಂಬೈ ಮೂಲದ ಫೈನಾನ್ಸ್ ಕಂಪೆನಿಯೊಂದರ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎನ್ನಲಾಗಿದೆ.

ಅದರಂತೆ ಈ ಕಂಪೆನಿ ಶಿಕ್ಷಣಕ್ಕಾಗಿ ಸಾಲ ನೀಡಲಿದ್ದು, ಅದಕ್ಕಾಗಿ ಅಗತ್ಯ ದಾಖಲೆಗಳನ್ನು ಪೋಷಕರು ನೀಡಬೇಕು. ಕೆಲವೊಂದು ಕಂತುಗಳಲ್ಲಿ ಸಾಲ ಮರುಪಾವತಿಸುವ ಆಫರ್ ಇದಾಗಿದ್ದು, ಸಾಲ ಪಡೆಯುವಂತೆ ಕಂಪೆನಿಯಿಂದ ಪೋಷಕರಿಗೆ ಕರೆ ಬರುತ್ತಿದೆ ಎನ್ನುವ ಅಸಮಾಧಾನದ ಮಾತುಗಳು ಕೇಳಿ ಬಂದಿದೆ. ಇದನ್ನು ಗಮನಿಸಿದಾಗ ಯೇನಪೋಯ ಶಾಲೆಗೆ ಬರುವ ಎಲ್ಲ ಮಕ್ಕಳ ಪೋಷಕರ ಸಂಪರ್ಕ ಸಂಖ್ಯೆಯನ್ನು ಫೈನಾನ್ಸ್ ಕಂಪೆನಿಗೆ ನೀಡಲಾಗಿದೆ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.
ಈ ಮೂಲಕ ಯೇನಪೋಯ ಶಿಕ್ಷಣ ಸಂಸ್ಥೆ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಮಕ್ಕಳ ಪೋಷಕರಿಗೆ ಶಿಕ್ಷಣಕ್ಕಾಗಿಯೇ ಜೀವನಪೂರ್ತಿ ಸಾಲಗಾರರನ್ನಾಗಿಸಿ ತಮಗಾಗುವ ನಷ್ಟದಿಂದ ಮುಕ್ತರಾಗುವ ಪ್ಲ್ಯಾನ್ ರೂಪಿಸಿದೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಯಾವುದೇ ಒತ್ತಡ, ಪ್ರಭಾವಕ್ಕೆ ಮಣಿಯದೆ ಸರ್ಕಾರ, ಶಿಕ್ಷಣ ಇಲಾಖೆ ಕ್ರಮ ಕೈಗೊಂಡು ಲಾಕ್ಡೌನ್ ಸಂಕಷ್ಟದಲ್ಲಿರುವ ಪೋಷಕರಿಗೆ ರಿಲೀಫ್ ನೀಡಬೇಕು ಎನ್ನುವ ಅಗ್ರಹ ಕೇಳಿ ಬಂದಿದೆ.