ಬೆಂಗಳೂರು: ಮೇ ೨೮ರಂದು ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಚಾಲನೆ ದೊರೆಯಲಿದೆ.
ಇಂದು ಈ ಬಗ್ಗೆ ಎಲ್ಲಾ ಡಿಸಿಗಳ ಜತೆಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಸುನೀಲ್ ಕುಮಾರ್ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದಾರೆ.
ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ಘೋಷವಾಕ್ಯದೊಂದಿಗೆ 3 ಹಂತದಲ್ಲಿ 3 ತಿಂಗಳು ಕಾಲ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಸಚಿವ ಸುನೀಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ಸ್ವಾತಂತ್ರ್ಯ ಹೋರಾಟ ನಡೆದ ವೀರಭೂಮಿಯಲ್ಲಿ ಶಿಲಾಫಲಕ ಅಳವಡಿಸಲಾಗುತ್ತದೆ.
ಕಾರ್ಯಕ್ರಮ ನಡೆಸಲು ಡಿಸಿ ಖಾತೆಗೆ ತಲಾ ಒಂದೂವರೆ ಲಕ್ಷ ರೂ. ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆಯ ಎಡಿಗಳ ಖಾತೆಗೆ ೧.೮೦ ಲಕ್ಷ ರೂ. ಜಮೆ ಮಾಡಲಾಗಿದೆ.
ಸಾಧ್ಯವಿರುವ ಕಡೆಗಳಲ್ಲಿ ಕನಿಷ್ಠ 2-3 ಸಾವಿರ ಜನರೊಂದಿಗೆ ಮೆರವಣಿಗೆಗೆ ಸೂಚನೆ ನೀಡಲಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳನ್ನು ಮೆರವಣಿಗೆಯಲ್ಲಿ ಬಳಸಿಕೊಳ್ಳದಂತೆ ಸಚಿವ ಸುನೀಲ್ ಕುಮಾರ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.