ಬೆಳ್ತಂಗಡಿ; ಹೋಟೆಲ್ ಕಾರ್ಮಿಕನನ್ನು ಮದ್ಯ ಸೇವಿಸಲು ಕರಿಬೇಡಿ ಎಂದಿದ್ದಕ್ಕೆ ಹೋಟೆಲ್ ಮಾಲಕಿಯ ಪುತ್ರನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ನಡೆದಿದೆ.
ಮಚ್ಚಿನದ ಪ್ರತಿಭಾ ರೈ ಅವರ ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ ಅವರನ್ನು ಕೇಶವ ಪೂಜಾರಿ ಎಂಬವರು ಮದ್ಯ ಸೇವಿಸಲು ಕರೆದಾಗ ಪ್ರತಿಭಾ ಅವರು ಆಕ್ಷೇಪಿಸಿದ್ದಾರೆ. ಆಗ ಕೇಶವ ಪೂಜಾರಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಈ ಬಗ್ಗೆ ಪ್ರತಿಭಾ ಅವರ ಪುತ್ರ ಹೃತಿಕ್ ರೈ ಕೇಶವ ಪೂಜಾರಿ ಬಳಿ ಹೋಗಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಬಯ್ಯಬಾರದು ಎಂದು ತಿಳಿ ಹೇಳಿ ಬರುತ್ತಿದ್ದಂತೆ ಆರೋಪಿಯು ಹೃತಿಕ್ಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಗಲಾಟೆ ಬಿಡಿಸಲು ಬಳಿ ಬಂದ ಹೊಟೇಲಿನ ಕೆಲಸದಾಳು ಚಂದ್ರ ಅವರಿಗೆ ಕೂಡ ಆರೋಪಿ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪ್ರತಿಭಾ ರೈ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇನ್ನು ಕೇಶವ ಪೂಜಾರಿ ಅವರು ಹೃತಿಕ್ ರೈ ಹಾಗೂ ಚಂದ್ರ ಅವರ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರತಿದೂರನ್ನು ನೀಡಿದ್ದು, ಈ ಎರಡೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.