ಬೆಂಗಳೂರು: ಮಾಜಿ ಭೂಗತ ದೊರೆ, ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹಾಗೂ ಉದ್ಯಮಿ ಶ್ರೀನಿವಾಸ್ ನಾಯ್ಡು ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಉದ್ಯಮಿ ಶ್ರೀನಿವಾಸ್ ವಿರುದ್ಧ ದೂರು ಕೂಡ ದಾಖಲಾಗಿದೆ.
ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ಖಾಜಿ ಬಾರ್ ಅಂಡ್ ಕಿಚನ್ ರೆಸ್ಟೋರೆಂಟ್ ನಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹಾಗೂ ಉದ್ಯಮಿ ಶ್ರೀನಿವಾಸ್ ಊಟಕ್ಕೆ ತೆರಳಿದ್ದರು. ಈ ವೇಳೆ ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಲವು ದಿನಗಳಿಂದ ಹಣಕಾಸು ವಿಚಾರವಾಗಿ ರಿಕ್ಕಿ ರೈ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಮಧ್ಯೆ ಮನಸ್ತಾಪವಿತ್ತು. ಇದರಿಂದ ಆಗಾಗ್ಗೆ ಜಗಳ ಕೂಡ ಆಗುತ್ತಿತ್ತು. ಈಗ ಅದು ಬಹಿರಂಗವಾಗೆ ರೆಸ್ಟೋರೆಂಟ್ ನಲ್ಲಿ ಹೊಡೆದಾಟದ ಮೂಲಕ ಹೊರ ಬಿದ್ದಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.
ಇನ್ನು ಕೆಲ ತಿಂಗಳ ಹಿಂದಷ್ಟೇ ಉದ್ಯಮಿ ಶ್ರೀನಿವಾಸ್ ನಾಯ್ಡು ಮನೆಯ ಮುಂದೆ ನಿಲ್ಲಿಸಲಾಗಿದ್ದಂತ ಕಾರುಗಳಿಗೆ ರಿಕ್ಕಿ ರೈ ಹಾಗೂ ಸಹಚರರು ಬೆಂಕಿ ಹಚ್ಚಿ ದುಂಡಾವರ್ತನೆ ತೋರಿದ್ದರು. ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿ, ನ್ಯಾಯಾಲಯಕ್ಕೆ ಪೊಲೀಸರು ಆರೋಪ ಪಟ್ಟಿ ಕೂಡ ಸಲ್ಲಿಸಿದ್ದರು.