ಮಂಗಳೂರು: ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗೆ ಮುಂದಿನ ಚುನಾವಣೆ ಎದುರಿಸಲು ಯಾವುದೇ ಅಭಿವೃದ್ಧಿ ಪರ ಕಾರ್ಯಗಳಿಲ್ಲ. ಹೀಗಾಗಿ ಚುನಾವಣೆಯಲ್ಲಿ ಹಿಂದೂ ಸಂಘಟನೆಗಳ ಬೆಂಬಲದ ಮೊರೆ ಹೋಗಿದೆ. ಹಿಂದೂ ಸಂಘಟನೆಗಳ ಬೆಂಬಲವಿಲ್ಲದೇ ಬಿಜೆಪಿಗೆ ಚುನಾವಣೆ ಎದುರಿಸಲು ಸಾಧ್ಯವೇ ಎಂದು ಆಮ್ ಆದ್ಮಿ ಪಕ್ಷದ ದಕ್ಷಿಣ ಕನ್ನಡ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಶ್ಫರ್ ರಝಾಕ್ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಈ ರಾಜ್ಯಕ್ಕೆ, ಈ ಜಿಲ್ಲೆಗೆ ಕೊಟ್ಟ ಅಭಿವೃದ್ಧಿ ಶೂನ್ಯ. ಜೊತೆಗೆ 40% ಕಮಿಷನ್ ಆರೋಪ ಬೇರೆ. ಇವೆಲ್ಲದರ ನಡುವೆ ಬಿಜೆಪಿಗೆ ಜನರ ಬಳಿ ಹೋಗಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾವಾಗಿದೆ. ತುಳು ಭಾಷೆಗೆ ಮಾನ್ಯತೆ ನೀಡುವ ವಿಚಾರದಲ್ಲೂ ಬಿಜೆಪಿ ಜಿಲ್ಲೆಗೆ ಅನ್ಯಾಯ ಮಾಡಿದೆ. ಸ್ವಾಭಿಮಾನ ಕಳೆದುಕೊಂಡಿರುವ ಬಿಜೆಪಿ ಜನರ ಬಳಿ ಹೇಗೆ ಹೋಗುತ್ತದೆ ಎಂದು ನೋಡಬೇಕಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ 7 ಶಾಸಕರು, ಓರ್ವ ಸಂಸದರಿದ್ದರೂ, ನಮ್ಮ ಭಾಷೆ, ಸಂಸ್ಕೃತಿಗೆ ಅವರ ಕೊಡುಗೆ ಶೂನ್ಯ. ಕೇವಲ ದ್ವೇಷ ಭಾಷಣವನ್ನಷ್ಟೇ ಮಾಡುವ ಬಿಜೆಪಿ ನಾಯಕರನ್ನು ಮತ್ತೆ ಆರಿಸಿ ವಿಧಾನಸಭೆಗೆ ಕಳುಹಿಸಬೇಕೇ? ಎಂದು ಅವರು ಮತದಾರರ ಬಳಿ ಪ್ರಶ್ನಿಸಿದ್ದಾರೆ