ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ಬ್ಯಾಂಕಿನಲ್ಲಿ ಅಡವಿಟ್ಟ ಚಿನ್ನಾಭರಣದ ಕಾರ್ಡ್ ಪರಿಶೀಲನೆ ಮುಂತಾದವುಗಳಿಗಾಗಿ ಬ್ಯಾಂಕ್ ನೀಡಿದ ಸೂಚನೆಯಂತೆ ಗ್ರಾಹಕರು ಬಂದು ಚಿನ್ನ ಪರಿಶೀಲನೆ ನಡೆಸಿದರು.
ಮೊದಲ ದಿನವಾದ ಸೋಮವಾರದಂದು 325 ಗ್ರಾಹಕರು ಆಗಮಿಸಿ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ.
ಇನ್ನು ಬ್ಯಾಂಕ್ ನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಈ ಕುರಿತಂತೆ ಸ್ಪಷ್ಠತೆ ನೀಡಿದ್ದಾರೆ. ದರೋಡೆ ಸಂದರ್ಭದಲ್ಲಿ ಶೇ. 30ರಷ್ಟು ಚಿನ್ನಾಭರಣ ಬ್ಯಾಂಕ್ನಲ್ಲೇ ಉಳಿದಿದ್ದು, ಇದರ ಬಗ್ಗೆ ಮುಂದಿನ ಐದು ದಿನಗಳಲ್ಲಿ ಮಾಹಿತಿ ನೀಡಲಾಗುವುದು. ಹಾಗೆಯೇ ದರೋಡೆಗೀಡಾದ ಚಿನ್ನಾಭರಣದ ಈಗಿನ ಮೌಲ್ಯವನ್ನು ನೀಡುವ ಭರವಸೆಯನ್ನು ಗ್ರಾಹಕರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬಂದಿ ಗ್ರಾಹಕರೊಂದಿಗೆ ಸಮಾಲೋಚನೆ ನಡೆಸಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಉಳ್ಳಾಲ್ ಅವರು ಈ ಕುರಿತಂತೆ ಪ್ರತಿಕ್ರಯಿಸಿ, ‘ಕೆಲವರು 3ರಿಂದ 4 ಖಾತೆಗಳನ್ನು ಹೊಂದಿದ್ದಾರೆ. ಗ್ರಾಹಕರ ಹಿತಾಸಕ್ತಿಗೆ ಬ್ಯಾಂಕ್ ಬದ್ಧವಾಗಿದ್ದು, ಪ್ರತಿಯೊಬ್ಬರ ಚಿನ್ನಾಭರಣಗಳಿಗೆ ಬ್ಯಾಂಕ್ ಗ್ಯಾರಂಟಿ ನೀಡಿದೆ. ದರೋಡೆಗೆ ಒಳಗಾದ ಚಿನ್ನಾಭರಣ ಸಿಕ್ಕಿದರೆ ಆ ಚಿನ್ನಾಭರಣವನ್ನು ಗ್ರಾಹಕರಿಗೆ ನೀಡಲಾಗುವುದು. ಇಲ್ಲದಿದ್ದರೆ ಅದರ ಮೌಲ್ಯ ಭರಿಸಲು ಬ್ಯಾಂಕ್ ಸಿದ್ಧವಿದೆ ಎಂದು ತಿಳಿಸಿದರು.