ಮಂಗಳೂರು: ಪ್ರಖ್ಯಾತ ಟಿವಿ ಶೋ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕುಡ್ಲದ ಕುವರಿ ಅಪೂರ್ವ ಶೆಟ್ಟಿ 6.40 ಲಕ್ಷ ರೂಪಾಯಿ ಗೆದ್ದಿದ್ದಾರೆ. ಅಲ್ಲದೇ ಕಾರ್ಯಕ್ರಮದ ವೇದಿಕೆಯಲ್ಲಿ ತುಳುವಿನಲ್ಲಿ ಮಾತನಾಡಿ ತುಳುವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..
ಅಪೂರ್ವ ಶೆಟ್ಟಿ ಭಾಗಿಯಾದ ಸಂಚಿಕೆ ಸೆ. 27ರಂದು ರಾತ್ರಿ ಪ್ರಸಾರವಾಗಿದೆ. ಶೋನಲ್ಲಿ ಅಪೂರ್ವ 10 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದರು. 11ನೇ ಪ್ರಶ್ನೆಯಾಗಿ “ಮ್ಯಾನ್ ಗ್ರೋವ್ ಫಾರೆಸ್ಟ್(ಕಾಂಡ್ಲಾವನ) ಹೆಚ್ಚಿರುವ ದೇಶ ಯಾವುದು?’ ಪ್ರಶ್ನೆಯನ್ನು ಕೇಳಲಾಗಿತ್ತು. ಬ್ರೆಜಿಲ್, ನೈಜಿರೀಯಾ, ಬಾಂಗ್ಲಾದೇಶ ಹಾಗೂ ಇಂಡೋನೇಶ್ಯಾದ ಆಯ್ಕೆ ನೀಡಲಾಗಿತ್ತು. ಉತ್ತರಿಸಲು ಗೊಂದಲಕ್ಕೀಡಾದ ಅಪೂರ್ವಾ ಉತ್ತರಕ್ಕಾಗಿ ಮಾವನಿಗೆ ಕರೆ ಮಾಡಿದರು. ಅವರೊಂದಿಗೆ ತುಳುವಿನಲ್ಲೇ ಪ್ರಶ್ನೆ ಕೇಳಿದ್ದರು. ಅವರು ನೈಜೀರಿಯಾ ಆಗಿರಬೇಕೆಂದು ಉತ್ತರಿಸಿದ್ದರು. ಆ ಉತ್ತರದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ತಪ್ಪಾಗಿ ಉತ್ತರಿಸಿದರೆ ಹಣ ಕಡಿತವಾಗುವುದರಿಂದ 10 ಪ್ರಶ್ನೆಗಳ ಉತ್ತರಕ್ಕೆ ದೊರಕಿದ್ದ 6.40 ಲಕ್ಷ ರೂ.ಗಳಿಗೇ ಖುಷಿ ಪಟ್ಟು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಇನ್ನು ಶೋನಲ್ಲಿ ಅಪೂರ್ವ ಅಮಿತಾಬ್ ಬಚ್ಚನ್ ಅವರಲ್ಲಿ “ನನ್ನ ತಂದೆ ನಿಮ್ಮ ದೊಡ್ಡ ಅಭಿಮಾನಿ’ ಎಂದು ಹೇಳಿದ್ದಾರೆ.ಆಗ ಅಮಿತಾಭ್ ಬಚ್ಚನ್ ಆಕೆಯ ತಂದೆ ಲೋಕನಾಥ್ ಶೆಟ್ಟಿಗೆ ವೀಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಆಗ ಲೋಕನಾಥ ಶೆಟ್ಟಿ ಪುತ್ರಿ ಜತೆ ತುಳುವಿನಲ್ಲಿ ಮಾತನಾಡಿ ತುಳುವಿನ ಮಹತ್ವವನ್ನು ಮೆರೆಸಿದ್ದಾರೆ. ಲೋಕನಾಥ ಶೆಟ್ಟಿ ಅವರು ಅಮಿತಾಭ್ ಜತೆಗೆ ಮಾತನಾಡುತ್ತಾ ಆನಂದಭಾಷ್ಪ ಸುರಿಸಿದ್ದಾರೆ. ಆಗ ಅಪೂರ್ವಾಕಣ್ಣಲ್ಲೂ ನೀರು ಬರುವುದನ್ನು ನೋಡಿ ಅಮಿತಾಭ್ ಪೇಪರ್ ಕರ್ಚೀಫ್ ನೀಡಿದ್ದಾರೆ.