ಮಂಗಳೂರು: ನಗರದ ವಿದ್ಯಾರ್ಥಿನಿ ಅನುಷಾ ಭಟ್ ಗುರುವಾರ ಉಕ್ರೇನ್ನಿಂದ ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅನುಷಾಳ ಕುಟುಂಬ, ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಅನುಷಾ ಬಿಜೈ ಮೂಲದವರಾಗಿದ್ದು, ಮೂರನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ. ರಷ್ಯಾ ಯುಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಅಲ್ಲಿ ಸಿಕ್ಕಿಬಿದ್ದ 18 ವಿದ್ಯಾರ್ಥಿಗಳಲ್ಲಿ ಈಕೆಯೂ ಒಬ್ಬಳು.
“ನಾವು ವಿನ್ನಿಟ್ಸಿಯಾದಿಂದ ಉಕ್ರೇನ್ನ ಗಡಿ ಪಟ್ಟಣವಾದ ಚೆರ್ನಿವ್ಟ್ಸಿಗೆ ಬಸ್ ನಲ್ಲಿ ಬಂದೆವು. ಅಲ್ಲಿಂದ ನಾವು ರೊಮೇನಿಯನ್ ಗಡಿಯನ್ನು ತಲುಪಿದೆವು. ಗಡಿಭಾಗದ ಕಡೆ ಸುಮಾರು 2 ಕಿ.ಮೀ ನಡೆದು ರಸ್ತೆ ಮೂಲಕ ದಾಟಬೇಕಿತ್ತು. ಸ್ಥಳದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳು ಇರಲಿಲ್ಲ. ಉಕ್ರೇನಿಯನ್ ಸೇನಾ ಅಧಿಕಾರಿಗಳನ್ನು ಮಾತ್ರ ನಿಯೋಜಿಸಲಾಗಿತ್ತು ಎಂದು ಮಂಗಳೂರು ನಿಲ್ದಾಣಕ್ಕೆ ಬಂದಿಳಿದ ಸಂದರ್ಭ ಹೇಳಿದರು.
“ನಾವು ರೊಮೇನಿಯನ್ ಗಡಿಯಲ್ಲಿರುವ ಅಧಿಕಾರಿಗಳ ಬಳಿಗೆ ಹೋದೆವು. ನಂತರ ನಮ್ಮನ್ನು ಎರಡು ದಿನಗಳ ಕಾಲ ರೊಮೇನಿಯಾದ ಆಶ್ರಯಕ್ಕೆ ಸ್ಥಳಾಂತರಿಸಲಾಯಿತು. ನಂತರ ಭಾರತ ಸರ್ಕಾರವು ಬುಕಾರೆಸ್ಟ್ನಿಂದ ಮುಂಬೈಗೆ ವಿಮಾನದ ವ್ಯವಸ್ಥೆ ಮಾಡಿತು, ”ಎಂದು ಹೇಳಿದರು.
ಅನುಷಾ ಅವರ ಪೋಷಕರಾದ ವಿದ್ಯಾ ಮತ್ತು ಹರಿಶ್ಚಂದ್ರ ಭಟ್ ಅವರು ಜಿಲ್ಲಾಧಿಕಾರಿ, ಶಾಸಕರು ಮತ್ತು ಸಂಸದರ ನಿರಂತರ ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಿದರು.