ದೆಹಲಿ: ನಾನು ಸಿಎಂ ರೇಸ್ ನಲ್ಲಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಇಂದು ಪ್ರತಿಕ್ರಿಯಿಸಿರುವ ಕಟೀಲ್, ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಎಂದಿದ್ದಾರೆ.
ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್ ನಡೆಸುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿರುವ ನಳೀನ್ ಕುಮಾರ್ ಕಟೀಲ್, ಪಕ್ಷ ಸಂಘಟನೆ ನನ್ನ ಕೆಲಸ, ಹೈಕಮಾಂಡ್ ಸಿಎಂ ಆಯ್ಕೆ ಬಗ್ಗೆ ಸಲಹೆ ಕೇಳಿದ್ರೆ ಹೇಳುತ್ತೇನೆ, ಆಗ ಸಿಎಂ ಯಾರು ಆಗಬೇಕೆಂದು ನನ್ನ ಸಲಹೆ ಹೇಳುತ್ತೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಸಿಎಂ ಸ್ಥಾನದ ರೇಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಹೆಸರು ಕೂಡಾ ಕೇಳಿ ಬಂದಿತ್ತು.
ಇದರ ಜೊತೆಗೆ ಇತ್ತ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ವೇಳೆಯಲ್ಲೇ ಕಟೀಲ್ ದೆಹಲಿಗೆ ತೆರಳಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರೇಸ್ ನಲ್ಲಿ ತಾವು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.