ಸುಳ್ಯ: ಬೂತ್ ಮಟ್ಟದಲ್ಲಿ ಸ್ಪರ್ಧೆ ಮಾಡಿ ಗೆದ್ದವರು ಮತ್ತು ಸೋತವರು ಹಾಗೂ ಅವಕಾಶ ವಂಚಿತ ಎಲ್ಲ ಮಹಿಳೆಯರೂ ಕೂಡಾ ನಾಯಕಿಯರೇ. ಇವರೆಲ್ಲರನ್ನು ಒಗ್ಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ನಾ-ನಾಯಕಿ ಸಮಾವೇಶದ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದು ಮಾಜಿ ಸಚಿವೆ, ‘ಕಾಂಗ್ರೆಸ್ ನಾ… ನಾಯಕಿ’ ಸಮಾವೇಶದ ರಾಜ್ಯ ಸಂಚಾಲಕಿ ಉಮಾಶ್ರೀ ಹೇಳಿದರು. ಕಾಂಗ್ರೆಸ್ ನಾ… ನಾಯಕಿ ಸಮಾವೇಶದ ಕುರಿತು ಇಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದಪೂರ್ವ ಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಗ್ರಾ.ಪಂ., ತಾ.ಪಂ., ಜಿ.ಪಂ.ನ ಹಾಲಿ ಸದಸ್ಯರು, ಮಾಜಿ ಸದಸ್ಯರು, ಚುನಾವಣೆಯಲ್ಲಿ ಸ್ಪರ್ಧಿಸಿದವರು, ಪಕ್ಷದಲ್ಲಿ ಅವಕಾಶ ವಂಚಿತರಾದವರು ಹೀಗೆ ಎಲ್ಲರನ್ನು ಪಕ್ಷದಲ್ಲಿ ಮುಖ್ಯ ವಾಹಿನಿಗೆ ತರಬೇಕು. ಎಲ್ಲ ಮಹಿಳೆಯರೂ ನಾಯಕಿಯರಾಗಬೇಕು ಎಂಬ ನಿಟ್ಟಿನಲ್ಲಿ ನಾ-ನಾಯಕಿ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾವೇಶದ ಎಲ್ಲ ಕೆಲಸವನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. ಜೊತೆಗೆ ಪಕ್ಷ ಸಂಘಟನೆಯನ್ನು ಎಲ್ಲರೂ ಸೇರಿ ಮಾಡೋಣ ಎಂದು ಉಮಾಶ್ರೀ ಹೇಳಿದರು.
ರಾಜ್ಯದಲ್ಲಿ ಇರುವ ಬಿಜೆಪಿ ಸರಕಾರ ಜನಪರವಾಗಿ ಕೆಲಸ ಮಾಡುತ್ತಿಲ್ಲ. ಸಬ್ಸಿಡಿ ಸಾಲ, ಸಾಲಮನ್ನಾ ನಿಲ್ಲಿಸಿದ್ದಾರೆ. ಶಾಲಾ ಮಕ್ಕಳಿಗೆ ಶೂ ಇತ್ಯಾದಿ ಸವಲತ್ತು ಸಿಗುತ್ತಿತ್ತು. ಅದನ್ನೂ ನಿಲ್ಲಿಸಿ ಮಕ್ಕಳಿಗೆ ಅನ್ಯಾಯ ಮಾಡಿದೆ. ಇಂತಹ ಸರ್ಕಾರವನ್ನು ಕಿತ್ತೊಗೆದು ಜನರ ಪರ ಕಾಳಜಿ ಇರುವ ಕಾಂಗ್ರೆಸ್ನ್ನು ಇಲ್ಲಿ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು. ಸಮಾಜದಲ್ಲಿ ಭಾವನಾತ್ಮಕ ವಿಷಯಗಳ ಮೂಲಕ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಪಕ್ಷದಲ್ಲಿ ಬದ್ದತೆ ಇಟ್ಟು ದುಡಿದು ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬೇಕು ಎಂದು ಉಮಾಶ್ರೀ ಹೇಳಿದರು.
ಸಭೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕೆಪಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಸದಸ್ಯ ಡಾ. ರಘು, ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ರು.