Sunday, June 29, 2025
Homeಕರಾವಳಿಮಂಗಳೂರು: ಚೈತ್ರಾ ಕುಂದಾಪುರ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯ!

ಮಂಗಳೂರು: ಚೈತ್ರಾ ಕುಂದಾಪುರ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯ!

spot_img
- Advertisement -
- Advertisement -

ಮಂಗಳೂರು: ಒಂದು ಸಮುದಾಯದ ವಿರುದ್ದ ಅಶ್ಲೀಲ, ಕಾನೂನುಬಾಹಿರ ಪದಗಳನ್ನು ಬಳಸಿ ಪ್ರಚೋದನಕಾರಿ ಭಾಷಣ ಮಾಡುವುದರ ಮೂಲಕ ಜಿಲ್ಲೆಯ ಶಾಂತಿ ಕದಡುವ ಕೆಲಸವನ್ನು ಮಾಡಿರುವ ಚೈತ್ರಾ ಕುಂದಾಪುರ ಅವರ ವಿರುದ್ದ ಇಲಾಖೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ದಕ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್‌ ಸುವರ್ಣ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ನಿರಂತರವಾಗಿ ಕೋಮು ಭಾವನೆಯನ್ನು ಕೆರಳಿಸುವ ಕೆಲಸಗಳನ್ನು ಕೆಲವೊಂದು ಸಂಘಟನೆಗಳು ಮಾಡುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಸುರತ್ಕಲ್‌ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಎಂಬ ಯುವತಿ ತನ್ನ ಪ್ರಚೋದನಕಾರಿ ಭಾಷಣದ ಮೂಲಕ ಒಂದು ಧರ್ಮವನ್ನು ನಿಂದಿಸಿ ಈ ಮೂಲಕ ಶಾಂತಿ ಕದಡುವ ಕೆಲಸವನ್ನು ಕೈಗೊಂಡಿದ್ದಾರೆ. ಇಂತಹ ಕೋಮುಪ್ರಚೋದಕ ಭಾಷಣಗಳಿಂದಾಗಿ ಸಮಾಜದ ಸ್ವಾಸ್ಥವನ್ನು ಕದಡುವ, ಮತೀಯ ಘರ್ಷಣೆಗೆ ಕಾರಣವಾಗುವ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕಾನೂನುಬಾಹಿರ ಪದಗಳನ್ನು ಬಳಸಿ ಒಂದು ಕೋಮಿನ ಜನರನ್ನು ಅವಮಾನಿಸಿದ್ದಲ್ಲದೆ, ಆ ಕೋಮಿನ ವಿರುದ್ಧ ಜನತೆಯನ್ನು ಎತ್ತಿಕಟ್ಟುವ, ದ್ವೇಷ ಹುಟ್ಟಿಸುವ ರೀತಿಯಲ್ಲಿ ಉದ್ರೇಕಕಾರಿ ಪದಗಳನ್ನು ಬಳಸಿದ್ದಾರೆ. ಇದರಿಂದಾಗಿ ಕ್ರಿಯೆ ಪ್ರಕ್ರಿಯೆಗಳು ಉಂಟಾಗುವ, ಕೋಮು ಘರ್ಷಣೆಯ ಭೀತಿ ಎದುರಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ನಗರ ಪೊಲೀಸ್‌ ಆಯುಕ್ತರು ಆಕೆಯ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಬೇಕು ಎಂದಿದ್ದಾರೆ.

ಇಷ್ಟೇ ಅಲ್ಲದೆ ತನ್ನ ಭಾಷಣದಲ್ಲಿ ತುಳುನಾಡಿನ ಕಾರಣಿಕ ಪುರಷರು, ಆರಾಧ್ಯ ದೈವಗಳಾದ ಕೋಟಿ ಚೆನ್ನಯರನ್ನು ದುರುಪಯೋಗ ಪಡಿಸಿ, ತುಳುವರ ಧಾರ್ಮಿಕ ನಂಬಿಕೆಗೆ ಘಾಸಿಯುಂಟು ಮಾಡಿದ್ದಾಳೆ. ಕೋಟಿ ಚೆನ್ನಯರು ಹಿಡಿಯುವ ಸುರಿಯ ಎಂಬ ಪವಿತ್ರ ಆಯುಧವನ್ನು ರೌಡಿಗಳು, ಕೋಮು ಘರ್ಷಣೆಯಲ್ಲಿ ಪುಂಡರು ಬಳಸುವ ತಲವಾರಿಗೆ ಹೋಲಿಸಿರುವುದು ಈಕೆಯ ಭಾಷಣದಲ್ಲಿ ದಾಖಲಾಗಿದೆ. ಇದು ಅತ್ಯಂತ ಆಘಾತಕಾರಿ, ಧಾರ್ಮಿಕ ನಂಬಿಕೆಗೆ ಘಾಸಿ ಉಂಟು ಮಾಡುವ ಪ್ರಯತ್ನವಾಗಿದೆ ಎಂದಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಗರಿಗೆ ಅಭಿವೃದ್ದಿ ಮರೆತು ಹೋಗಿದ್ದು ಚುನಾವಣೆಗೆ ಒಂದು ವರ್ಷ ಇರುವಾಗ ಇಂತಹ ವ್ಯಕ್ತಿಗಳ ಮೂಲಕ ಜನರನ್ನು ಪರಸ್ಪರ ಎತ್ತಿಕಟ್ಟುವ ಕೆಲಸ ಮಾಡುವುದು ಚೆನ್ನಾಗಿ ಅಭ್ಯಾಸವಾಗಿದೆ. ಜಿಲ್ಲೆಯಲ್ಲಿ ಕೋಮು ಸಂಘರ್ಷದ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಇದರಿಂದ ಸ್ಪಷ್ಟವಾದಂತಿದೆ. ಇಂತಹ ಕಟ್ಟದಾರಿಗಳನ್ನು ಬಿಟ್ಟು ನಿಜವಾದ ಅಭಿವೃದ್ಧಿಯನ್ನು ಮಾಡುವುದರ ಮೂಲಕ ಬಿಜೆಪಿ ಮಾಡಲಿ. ಇಂತಹ ಕೋಮು ಪ್ರಚೋದನೆಗೆ ಕಾರಣರಾದ ಚೈತ್ರಾ ಕುಂದಾಪುರ ಅವರ ವಿರುದ್ದ ಸರಕಾರ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕು. ರಾಜ್ಯದ ಗೃಹಸಚಿವರು ಜಿಲ್ಲೆಯಲ್ಲಿ ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!