ನವದೆಹಲಿ: ಅಗ್ನಿ ಪಥ್ ಯೋಜನೆಯಡಿ ಸೇನೆಗೆ ಸೇರುವವರಿಗೆ ಶಿಕ್ಷಣ ಮುಂದುವರಿಕೆಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸುತ್ತಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ಶಿಕ್ಷಣ ಮುಂದುವರಿಕೆಗೆ ಅವಕಾಶ ನೀಡಲು ಕೇಂದ್ರ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
12 ನೇ ತರಗತಿಯ ಶಿಕ್ಷಣ, ಸರ್ಟಿಫಿಕೇಟ್ ಪಡೆಯಲು ಅವಕಾಶ ಇದ್ದು, ಅಗ್ನಿ ವೀರರು ಎನ್ ಐಓಎಸ್ ಮೂಲಕ 12 ನೇ ತರಗತಿಯ ಶಿಕ್ಷಣ ಮತ್ತು ಸರ್ಟಿಫಿಕೇಟ್ ಪಡೆಯಬಹುದಾಗಿದೆ.
ರಕ್ಷಣಾ ಇಲಾಖೆಯ ಜೊತೆಗೆ ಚರ್ಚಿಸಿ ಕೇಂದ್ರ ಶಿಕ್ಷಣ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು, ಸೇವಾ ಕ್ಷೇತ್ರಕ್ಕೆ ಪ್ರಸ್ತುತವಾಗಿರುವಂತೆ ಕಸ್ಟಮೈಸ್ ಮಾಡಿದ ಕೋರ್ಸ್ ಅಭಿವೃದ್ಧಿಪಡಿಸುವ ಮೂಲಕ ಪ್ರಮಾಣ ಪತ್ರ ನೀಡಲಾಗುತ್ತದೆ.
ಇಡೀ ದೇಶದಲ್ಲಿ ಉದ್ಯೋಗ, ಉನ್ನತ ಶಿಕ್ಷಣದ ಉದ್ದೇಶಗಳಿಗೆ ಈ ಪ್ರಮಾಣಪತ್ರವನ್ನು ಬಳಕೆ ಮಾಡಬಹುದಾಗಿದ್ದು, ಕೇಂದ್ರ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಕಾಲ ಯುವಕರಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಅಗ್ನಿ ಪಥ್ ಯೋಜನೆ ಪ್ರಕಟಿಸಿತ್ತು.