ಸಕಲೇಶಪುರ; ಭೂಕುಸಿತದ ಬಳಿಕ ಮತ್ತೆ ಮಂಗಳೂರು- ಬೆಂಗಳೂರು ಮಧ್ಯೆ ರೈಲು ಸಂಚಾರ ಆರಂಭವಾಗಿದೆ. ಸಕಲೇಶಪುರ–ಸುಬ್ರಹ್ಮಣ್ಯ ನಿಲ್ದಾಣಗಳ ನಡುವಿನ ಕಡಗರಹಳ್ಳಿ ಎಂಬಲ್ಲಿ ಭೂಕುಸಿತ ಉಂಟಾಗಿತ್ತು. ಇದೀಗ ದುರಸ್ಥಿ ಕಾರ್ಯದ ಬಳಿಕ ಮತ್ತೆ ಮಂಗಳೂರು- ಬೆಂಗಳೂರು ಮಧ್ಯೆ ರೈಲು ಸಂಚಾರ ಆರಂಭವಾಗಿದೆ.
13 ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ಕಡಗರವಳ್ಳಿ ಮತ್ತು ಯಡಕುಮೇರಿ ನಡುವಿನ ರೈಲು ಮಾರ್ಗದ ಕೆಳಬದಿಯಲ್ಲಿ ಭೂಕುಸಿತವಾಗಿತ್ತು. ಆದರೆ ರೈಲ್ವೇ ಇಲಾಖೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ನಿರಂತರವಾಗಿ ಕ್ರಿಬ್ ಗೋಡೆ, ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸ ಪರಿಣಾಮ ರೈಲು ಸಂಚಾರ ಮತ್ತೆ ಆರಂಭವಾಗಿದೆ.
ಆಗಸ್ಟ್ 4 ರಂದು ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ರೈಲಿನ ಎಂಜಿನ್ ಓಡಿಸುವ ಮೂಲಕ ಸುರಕ್ಷತೆ ಪರಿಶೀಲಿಸಲಾಯಿತು. ಆಗಸ್ಟ್ 6 ರಂದು ಪೂರ್ಣ ಸಾಮಗ್ರಿ ಹೊತ್ತ ಗೂಡ್ಸ್ ರೈಲು ಈ ಮಾರ್ಗದಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಸದ್ಯಕ್ಕೆ ಈ ಸ್ಥಳದಲ್ಲಿ ರೈಲಿನ ವೇಗದ ಮಿತಿಯನ್ನು 15 ಕಿ.ಮೀ. ನಿಗದಿಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೈಲು ಮಾರ್ಗವನ್ನು ತ್ವರಿತಗತಿಯಲ್ಲಿ ದುರಸ್ತಿ ಮಾಡಿರುವುದಕ್ಕೆ ನೈರುತ್ಯ ರೈಲ್ವೆ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ, ಉಪ ಮಹಾಪ್ರಬಂಧಕ ಕೆ.ಎಸ್. ಜೈನ್ ಹರ್ಷ ವ್ಯಕ್ತಪಡಿಸಿದ್ದಾರೆ.