ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಇಂದು ಹೊರ ಬಿದ್ದಿದೆ. 28 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದ ತೀರ್ಪುವನ್ನು ನೀಡಿದವರು. ಲಖ್ನೋ ಸಿಬಿಐ ಕೋರ್ಟ್ ನ ವಿಶೇಷ ನ್ಯಾಯಾಧೀಶರಾದ ಎಸ್.ಕೆ.ಯಾದವ್ ಅವರು. ಇವರು ಇಂದು ತೀರ್ಪು ಪ್ರಕಟಿಸಿದ ನಂತರ ತಮ್ಮ ಸೇವೆಯಿಂದ ನಿವೃತ್ತರಾಗಿದ್ದಾರೆ.
ಅಂದ್ಹಾಗೆ ಲಖ್ನೋ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 2017ರಿಂದ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನಿರಂತರವಾಗಿ ವಿಚಾರಣೆ ನಡೆಸುತ್ತಿತ್ತು. 60 ವರ್ಷದ ನ್ಯಾಯಾಧೀಶರಾದ ಎಸ್.ಕೆ.ಯಾದವ್ ಅವರು 2019ರಲ್ಲಿಯೇ ಸೇವೆಯಿಂದ ನಿವೃತ್ತಿಯಾಗಿದ್ದರು. ಆದರೆ 2005ರಿಂದ ಈ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಯಾದವ್ ಅವರ ಸೇವಾವಧಿಯನ್ನು ಸುಪ್ರೀಂಕೋರ್ಟ್ ಮುಂದುವರಿಸಿ ಆದೇಶ ನೀಡಿತ್ತು.
ಈ ಪ್ರಕರಣದ ವಿಚಾರಣೆಯ ವಾದ, ಪ್ರತಿವಾದ ಆಲಿಸಿ ಇನ್ನು ಎರಡು ವರ್ಷಗಳಲ್ಲಿ ಅಂತಿಮ ತೀರ್ಪನ್ನು ಪ್ರಕಟಿಸುವಂತೆ ಸುಪ್ರೀಂಕೋರ್ಟ್ ಜಡ್ಜ್ ಎಸ್.ಕೆ.ಯಾದವ್ ಅವರಿಗೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಅವರ ಸೇವಾವಧಿ 2019ಕ್ಕೆ ಮುಕ್ತಾಯಗೊಂಡಿದ್ದು, ಸುಪ್ರೀಂಕೋರ್ಟ್ ಮತ್ತೆ ಒಂದು ವರ್ಷ ಅವಧಿಯನ್ನು ವಿಸ್ತರಿಸಿತ್ತು. ಇಂದು ಅಂತಿಮ ತೀರ್ಪು ಪ್ರಕಟಿಸಿ ಸೇವಾವಧಿಯಿಂದ ನಿವೃತ್ತಿಯಾಗಿದ್ದಾರೆ.