ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರುಂಡವಿಲ್ಲದ ಕೈ, ಕಾಲುಗಳ ಮುಂಡ ಸಿಕ್ಕಿದ್ದ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ನೇತೃತ್ವದ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಛೋಟಾ ಮುಂಬೈ ಚಿತ್ರದ ನಟಿ, ಮಾಜಿ ಗಗನಸಖಿ ಹಾಗೂ ಮಿಸ್ ಕರ್ನಾಟಕ ಕಿರೀಟ ಪಡೆದಿದ್ದ ನಟಿ ಶನಯಾ ಕಾಟವೇಯನ್ನ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ನಟಿ ಶನಯಾ ಕಾಟವೇ ತನ್ನ ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದ ನಿಯಾಜ್ ಅಹ್ಮದ್ ಎಂಬಾತನನ್ನ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಯ ಬಗ್ಗೆ ತಿಳಿದ ಸಹೋದರ ರಾಕೇಶ್ ಕಾಟವೇ, ನಿಯಾಜ್ ಅಹ್ಮದ್ ಗೆ ಬುದ್ದಿಮಾತು ಹೇಳಿದ್ದ. ಆದರೆ ಇದರಿಂದ ಕೋಪಗೊಂಡ ನಿಯಾಜ್ ಅಹ್ಮದ್, ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಸಹೋದರ ರಾಕೇಶನನ್ನ ತನ್ನ ಸ್ನೇಹಿತರ ಜೊತೆ ಸೇರಿ ಎಪ್ರಿಲ್ 9ರಂದು ಹತ್ಯೆ ಮಾಡಿದ್ದ.

ಕೊಲೆ ಬಳಿಕ ಮೂರು ದಿನ ಶವವನ್ನ ಕಾರಿನ ಡಿಕ್ಕಿಯಲ್ಲಿ ಮುಚ್ಚಿಡಲಾಗಿತ್ತು. ಆದ್ರೆ ಶವದ ವಾಸನೆ ಬರುತ್ತಿದ್ದಂತೆ ರುಂಡ, ಮುಂಡ, ಎರಡು ಕೈ ಎರಡು ಕಾಲುಗಳನ್ನ ಕತ್ತರಿಸಿ ದೇಹವನ್ನ ಫೀಸ್ ಫೀಸ್ ಮಾಡಿ ಬೇರೆ ಬೇರೆ ಕಡೆ ಎಸೆಯಲಾಗಿತ್ತು. ಈ ಪ್ರಕರಣ ಕುರಿತು ತನಿಖೆ ಆರಂಭಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ತನಿಖಾಧಿಕಾರಿಗಳ ನಿರಂತರ ವಿಚಾರಣೆ ವೇಳೆ ಮೃತ ವ್ಯಕ್ತಿ ಹೆಸರು ರಾಕೇಶ ಕಾಟವೆ ಎಂದು ತಿಳಿದುಬಂತು. ಬಳಿಕ ಈತನನ್ನ ಕೊಲೆ ಮಾಡಿದ ನಿಯಾಜ್ ಅಹ್ಮದ್ ಕಟಿಗಾರ, ತೌಸೀಫ ಅಹ್ಮದ್ ಚೆನ್ನಾಪುರ, ಅಲ್ತಾಫ ತಾಜುದ್ದೀನ ಮುಲ್ಲಾ ಹಾಗೂ ಅಮನ ಅಲಿಯಾಸ್ ಮಹ್ಮದ ಉಮರ ಗಿರಣಿವಾಲೆ ಎಂಬವರನ್ನ ಬಂಧನ ಮಾಡಿದ್ರು.

ಇದೀಗ ಪ್ರಕರಣವನ್ನ ಮತ್ತಷ್ಟು ಆಳವಾಗಿ ತನಿಖೆ ನಡೆಸಿದ ಪೊಲೀಸರು ಇದೇ ಪ್ರಕರಣದಲ್ಲಿ ನಟಿ ಶನಾಯ ಕಾಟವೆ ಸಹಿತ ಮಲೀಕ್, ಫಿರೋಜ್ ಹಾಗೂ ಶೈಪುದ್ದೀನ ಎಂಬಾತನನ್ನ ಬಂಧನ ಮಾಡಿದ್ದಾರೆ. ಈ ಮೂಲಕ ಸಹೋದರನ ಕೊಲೆ ಪ್ರಕರಣದಲ್ಲಿ ನಟಿ ಸೇರಿದಂತೆ ಎಂಟು ಜನರನ್ನ ಬಂಧನ ಮಾಡಲಾಗಿದೆ.