ಬೆಳ್ತಂಗಡಿ: ರಾಜ್ಯದಲ್ಲಿ ಇಂಧನ ಇಲಾಖೆ ದೂರದೃಷ್ಟಿ ಯೋಜನೆಗಳನ್ನು ರೂಪಿಸುತ್ತಿದ್ದು 2031ರ ವೇಳೆಗೆ ಅಗತ್ಯಗಳನ್ನು ಗಮನದಲ್ಲಿರಿಸಿ ಯೋಜನೆಯನ್ನು ರೂಪಿಸಲಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯುತ್ ಸಮಸ್ಯೆಗೆ ಪರಿಹಾರವನ್ನು ಕಾಣುವ ಉದ್ದೇಶದಿಂದ 400 ಕೆ.ವಿ ವಿದ್ಯುತ್ ಸ್ಟೇಶನ್ ಸ್ಥಾಪಿಸುವ ಗುರಿಯಿದ್ದು ಅದಕ್ಕಾಗಿ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ಸರಕಾರದ ಇಂಧನ ಸಚಿವರಾದ ವಿ.ಎಸ್. ಸುನೀಲ್ ಕುಮಾರ್ ಹೇಳಿದರು.

ಅವರು ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ 33.75 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ 538 ವಿದ್ಯುತ್ ಪರಿವರ್ತಕಗಳ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕೃಷಿಕರಿಗೆ ಪೂರಕವಾದ ಗ್ರಾಹಕರಿಗೆ ಪೂರಕವಾದ ಹಾಗೂ ಉದ್ಯಮಗಳಿಗೆ ಪೂರಕವಾದ ಇಂಧನ ನೀತಿಗಳನ್ನು ರೂಪಿಸುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ. 24 ಗಂಟೆಯಲ್ಲಿ ವಿದ್ಯುತ್ ಪರಿವರ್ತಕಗಳ ಬದಲಾವಣೆಯ ಕಾರ್ಯವನ್ನು ಮಾಡುವ ಪ್ರಯತ್ನವನ್ನು ಇಲಾಖೆ ನಡೆಸಿದ್ದು ಇದು ಯಶಸ್ವಿಯಾಗಿದೆ ಎಂದರು. ಬೆಳ್ತಂಗಡಿ ತಾಲೂಕಿನಲ್ಲಿ ವಿದ್ಯುತ್ ಲೈನ್ ಬದಲಾವಣೆ ಹಾಗೂ ಇತರ ಅಗತ್ಯ ಕಾಮಗಾರಿಗಳಿಗಾಗಿ 39 ಕೋಟಿಯ ಕ್ರಿಯಾ ಯೋಜನೆ ಸಿದ್ದವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಿ ಮಾತನಾಡುತ್ತಾ ಬೆಳ್ತಂಗಡಿ ತಾಲೂಕಿನಲ್ಲಿ ಕುತ್ಲೂರು,ಬೆಳಾಲು, ಕಕ್ಕಿಂಜೆ ಯಲ್ಲಿ 110 ಕೆ.ವಿ ಸಬ್ ಸ್ಟೇಶನ್ ಹಾಗೂ ಅರಸಿನಮಕ್ಕಿ ಹಾಗೂ ಉಜಿರೆಯಲ್ಲಿ 33 ಕೆ.ವಿ ಸ್ಟೇಶನ್, ಹಾಗೂ ಕಳಿಯದಲ್ಲಿ 220ಕೆ.ವಿ ಸ್ಟೇಶನ್ ನಿರ್ಮಾಣ ಮಾಡುವ ಅಗತ್ಯವಿದ್ದು ಅದಕ್ಕೆ ಅನುದಾನ ಒದಗಿಸುವಂತೆ ಹಾಗೂ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಒದಗಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ,ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಪಟ್ಟಣ ಪ.ಚಾಯತಿನ ಅಧ್ಯಕ್ಷ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಮೆಸ್ಕಾಂ ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.