ಬಂಟ್ವಾಳ; ಗುಂಪು ಕಟ್ಟಿಕೊಂಡು ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಹೋಗುವ ಲಾರಿಗಳನ್ನು ತಡೆದ ಆರೋಪದಡಿ ಐದಕ್ಕೂ ಹೆಚ್ಚು ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 02-06-2025 ರಂದು ರಾತ್ರಿ ವೇಳೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಂಗಳಪದವು ಎಂಬಲ್ಲಿ ಕೆಲವು ಜನರು ಉದ್ದೇಶಪೂರ್ವಕವಾಗಿ ಗುಂಪು ಸೇರಿಕೊಂಡು ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಹೋಗುವ ಲಾರಿಗಳನ್ನು ತಡೆದು ನಿಲ್ಲಿಸಿದ್ದಾರೆ.ಈ ಬಗ್ಗೆ, ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಆಗ ಅಫಘಾತ ಪ್ರಕರಣಗಳನ್ನು ನೆಪವಾಗಿಟ್ಟುಕೊಂಡು ಆರೋಪಿಗಳಾದ ರಿಯಾಝ್, ಸಮದ್, ಕುಂಞಿಮೋನು, ರಹಿಮಾನ್ ಸಲೈಮಾನ್ ಮತ್ತು ಇತರ 25 ರಿಂದ 30 ಜನರು ರಸ್ತೆಯಲ್ಲಿ ಘನ ವಾಹನಗಳು ಸಂಚರಿಸದಂತೆ ತಡೆಯೊಡ್ಡಿರುವುದು ಹಾಗೂ ರಸ್ತೆಯಲ್ಲಿ ಯಾವುದೇ ಘನ ಲಾರಿಗಳನ್ನು ಸಂಚರಿಸಲು ಬಿಡುವುದಿಲ್ಲ ಎಂಬುದಾಗಿ ಜೋರಾಗಿ ಬೊಬ್ಬೆ ಹಾಕಿರುವುದು ಗೊತ್ತಾಗಿದೆ. ಸದ್ಯ ಆರೋಪಿಗಳ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.