ಹಾಸನ: ರಸ್ತೆ ಅಪಘಾತದಲ್ಲಿ ಎಂಎಸ್ಸಿ ವಿದ್ಯಾರ್ಥಿನಿ ದಾರುಣ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿ ಗೇಟ್ ಬಳಿ ನಡೆದಿದೆ. ಪೂಜಾ(21) ಮೃತ ದುರ್ದೈವಿ.
ಮೃತ ಪೂಜಾ ಮೈಸೂರಿನಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ಪರೀಕ್ಷೆಯಿದ್ದ ಕಾರಣ ಮೈಸೂರಿಗೆ ತೆರಳಿ ವಾಪಾಸ್ಸಾಗಿದ್ದರು. ಸಂಜೆಯಾದ ಕಾರಣ ಚನ್ನರಾಯಪಟ್ಟಣಕ್ಕೆ ತಂದೆಗೆ ಕರೆ ಮಾಡಿದ್ದರು. ಪೂಜಾ ಹಾಗೂ ಅವರ ತಂದೆ ವಾಪಾಸ್ಸಾಗುವ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿದೆ. ತಂದೆ ಮಗಳು ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪೂಜಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮನೆಯಿಂದ 500 ಮೀಟರ್ ಅಂತರದಲ್ಲಿಯೇ ಅಪಘಾತ ಸಂಭವಿಸಿದ್ದು, ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಕಾರು ಚಾಲಕನ ನಿರ್ಲಕ್ಷ್ಯತನವೇ ಈ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.