ಮಣಿಪಾಲ: ಅಲೆವೂರು- ಮಣಿಪಾಲ ರಸ್ತೆಯ ಶಾಂತಿನಗರದ ಬಳಿಯ ತಿರುವಿನಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಜನಾರ್ದನ ಎಂಬವರು ಸಾವನ್ನಪ್ಪಿದ್ದು, ಬೈಕ್ ಸವಾರ ಸಂತೋಷ್ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ.
ಘಟನೆಗೆ ಕಾರಣವಾದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಮಹಜರು ನಡೆಸಲು ತೆರಳಿದ ವೇಳೆ ಟಿಪ್ಪರ್ ವಾಹನದಲ್ಲಿ ಸುಮಾರು 2.5 ಯುನಿಟ್ ಮರಳು ಇರುವುದು ಕಂಡು ಬಂದಿದೆ.
ಟಿಪ್ಪರ್ ಚಾಲಕ ಹಾಗೂ ಮಾಲಕ ಸೇರಿಕೊಂಡು ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಅಕ್ರಮ ವಾಗಿ ಮರಳು ಸಾಗಾಟ ಮಾಡುತ್ತಿದ್ದುದು ತಿಳಿದುಬಂದಿದೆ.
ಅಲೆವೂರು-ಮಣಿಪಾಲ ಭಾಗದಲ್ಲಿ ರಾತ್ರಿ ವೇಳೆ ಅಕ್ರಮ ಮರಳು ಸಾಗಾಟದ ಟಿಪ್ಪರ್ ವಾಹನಗಳು ಎಗ್ಗಿಲ್ಲದೆ ಸಂಚಾರ ಮಾಡುತ್ತಿದ್ದು, ಇತರ ವಾಹನಗಳ ಸಂಚಾರ ಕಷ್ಟಕರ ವಾಗುತ್ತಿದೆ. ತಿರುವುಗಳಿಂದ ಕೂಡಿದ ಈ ರಸ್ತೆಯಲ್ಲಿ ಮರಳು ಸಾಗಾಟದ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದು, ಪೊಲೀಸರು ಹಾಗೂ ಗಣಿ ಇಲಾಖೆಯವರು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.