ಉಜಿರೆ: ಉಜಿರೆಯ ಸಿದ್ಧವನ ಬಸ್ ನಿಲ್ದಾಣ ಬಳಿ ದ್ವಿಚಕ್ರ ವಾಹನವೊಂದು ಕೆ.ಎಸ್.ಆರ್.ಟಿ.ಸಿ. ಬಸ್ಗೆ ಹಿಂಬದಿಯಿಂದ ಡಿಕ್ಕಿಹೊಡೆದಿದ್ದು ಸವಾರರಿಬ್ಬರು ಗಾಯಗೊಂಡ ಘಟನೆ ಜೂ.೨೩ರಂದು ವರದಿಯಾಗಿದೆ.

ಧರ್ಮಸ್ಥಳ ನಿವಾಸಿ ಯಶೋಧರ ಮತ್ತು ಪೆರಿಯಡ್ಕ ನಿವಾಸಿ ವಿನಿತ್ ಎಂಬವರು ದ್ವಿಚಕ್ರ ವಾಹನದಲ್ಲಿ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದು, ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಉಜಿರೆ ಸಿದ್ಧವನ ಬಸ್ ನಿಲ್ದಾಣದ ಬಳಿ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಅಪಘಾತದಿಂದ ದ್ವಿಚಕ್ರವಾಹನ ಜಖಂಗೊಂಡಿದ್ದು, ಸವಾರರಿಬ್ಬರೂ ಗಾಯಗೊಂಡಿದ್ದಾರೆ. ತಕ್ಷಣ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕರು ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಈಗ ತಾನೆ ಮಳೆಗಾಲ ಆರಂಭವಾಗಿದ್ದು, ಈ ಸಮಯದಲ್ಲಿ ರಸ್ತೆಗಳು ಹೆಚ್ಚಾಗಿ ಜಾರುವುದು ಸರ್ವೇಸಾಮಾನ್ಯವಾಗಿದೆ. ಮಳೆಯ ಸಂದರ್ಭ ರಸ್ತೆಯಲ್ಲಿ ಸಂಚರಿಸುವ ವೇಳೆ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಜಾಗ್ರತೆಯನ್ನು ವಹಿಸುವುದರ ಜೊತೆಗೆ ಹೆಲ್ಮೆಟ್ ಧರಿಸುವುದು ಸುರಕ್ಷತೆಯ ದೃಷ್ಟಿಯಿಂದ ಅಗತ್ಯವಾಗಿದೆ.