ಮುಲ್ಕಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ನೂತನ ಸಾರಥಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿಕೆ ಶಿವಕುಮಾರ್ ರ ಪರವಾಗಿ ಪುರಾಣ ಪ್ರಸಿದ್ಧ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಯ ಸೇವೆಗೆ ಪ್ರತಿ ದಿನವೂ (365 ದಿನ) ಒಂದು ಅಟ್ಟಿ ಮಲ್ಲಿಗೆ ಹೂವನ್ನು ನೀಡುವುದಾಗಿ ಮಾಜಿ ಸಚಿವ ಮತ್ತು ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಅಭಯಚಂದ್ರ ಜೈನ್ ಹರಕೆ ಹೊತ್ತುಕೊಂಡಿದ್ದಾರೆ.
ಹಾಗಾಗಿ ಇಂದು ಬಪ್ಪನಾಡು ಕ್ಷೇತ್ರಕ್ಕೆ ಆಗಮಿಸಿದ ಅಭಯಚಂದ್ರ ಜೈನ್, ದೇವರಿಗೆ ಇಂದಿನ ಒಂದು ಅಟ್ಟಿ ಮಲ್ಲಿಗೆ ಹೂವನ್ನು ಸಮರ್ಪಿಸಿದರು. ಹಾಗೆಯೆ ಮುಂದಿನ ದಿನಗಳಲ್ಲಿಯೂ ಪ್ರತಿನಿತ್ಯ ಮಲ್ಲಿಗೆ ಪೂರೈಕೆಯ ಜವಾಬ್ದಾರಿಯನ್ನು ವಹಿಸಿಕೊಂಡರು.
ಈ ಸಮಯದಲ್ಲಿ ಮುಲ್ಕಿ ಅರಸರಾದ ದುಗ್ಗಣ್ಣ ಸಾವಂತರು, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ನಗರ ಪಂಚಾಯತ್ ಸದಸ್ಯರಾದ ಯೋಗೀಶ್ ಕೋಟ್ಯಾನ್, ಬಾಲಚಂದ್ರ ಕಾಮತ್, ಮಂಜುನಾಥ್ ಕಂಬಾರ್, ಆಯುಷ್ ಜೈನ್, ಮಾಜಿ ಸದಸ್ಯರಾದ ಅಶೋಕ್ ಪೂಜಾರಿ ಮೂಲ್ಕಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಸಂಚಾಲಕರಾದ ರಕ್ಷಿತ್ ಪೂಜಾರಿ ಹಾಗೂ ಹರೀಶ್ ಕೊಳಚಿಕಂಬಳ ಉಪಸ್ಥತರಿದ್ದರು.