ಮಂಗಳೂರು: ಭಾರತೀಯ ಸೇನೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂಬ ತಂದೆಯ ಕನಸನ್ನು ಬೆನ್ನಟ್ಟಿ ಸಾಗಿದ ಕುಡ್ಲದ ಹುಡುಗಿ ಮನಿಷಾ ಕೊನೆಗೂ ಕನಸು ನನಸಾಗಿಸಿದ್ದಾಳೆ. ಈ ಮೂಲಕ ಏರ್ಫೋರ್ಸ್ ಫ್ಲೈಯಿಂಗ್ ಬ್ರ್ಯಾಂಚ್ಗೆ ಆಯ್ಕೆಯಾದ ರಾಜ್ಯದ ಏಕೈಕ ಧೀರೆ ಎಂಬ ಹೆಗ್ಗಳಿಕೆ ಮಾತ್ರರಾಗಿದ್ದಾರೆ.
ಅಶೋಕನಗರ ನಿವಾಸಿ ಭಾರತೀಯ ಸ್ಟೇಟ್ಬ್ಯಾಂಕ್ನ ನಿವೃತ್ತ ಅಧಿಕಾರಿ ಮನೋಹರ ಶೆಟ್ಟಿ ಮತ್ತು ಸರಕಾರಿ ಶಾಲೆ ಮುಖ್ಯೋಪಾಧ್ಯಾಯಿನಿ ಮಾಲತಿ ಶೆಟ್ಟಿ ದಂಪತಿಯ ಪುತ್ರಿ. ಭಾರತೀಯ ವಾಯುಪಡೆಯ ಫ್ಲೈಯಿಂಗ್ ಬ್ರ್ಯಾಂಚ್ಗೆ ಆಯ್ಕೆಯಾದ ಮನಿಷಾ ಜು.9ರಂದು ತರಬೇತಿಗೆ ಹೈದರಾಬಾದ್ಗೆ ತೆರಳಲಿದ್ದಾರೆ.
ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮತ್ತು ಸೈಂಟ್ ಅಲೋಶಿಯಸ್ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ರಾಮಯ್ಯ ಕಾಲೇಜಿನ ಬಿಇ ಪದವಿ ಪಡೆದಿದ್ದಾರೆ. ಇದಾದ ಬಳಿಕ ಮರ್ಸಿಡಿಸ್ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು.
ಮನಿಷಾ ಅವರ ತಂದೆ ಮನೋಹರ್ ಶೆಟ್ಟಿ ಈ ಹಿಂದೆ ವಾಯುಪಡೆಗೆ ಆಯ್ಕೆಯಾಗಿದ್ದರು. ಆದರೆ ಇವರ ಅಣ್ಣಾ ಏರ್ಫೋರ್ಸ್ನಲ್ಲಿದ್ದ ಕಾರಣ ತಂದೆ ಇವರಿಗೆ ಅನುಮತಿ ಕೊಡಲಿಲ್ಲ. ಈ ಕಾರಣದಿಂದ ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಪೈಲಟ್ ಮಾಡಬೇಕೆಂಬ ಕನಸು ಅವರದಾಗಿತ್ತು. ಇದಕ್ಕಾಗಿ ಬಾಲ್ಯದಿಂದಲೇ ಇಬ್ಬರು ಮಕ್ಕಳ ಚಲನವಲನ, ಆಸಕ್ತಿ ಗಮನಿಸಿ ಮನಿಷಾರನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿದರು.
ಮನಿಷಾ 6ನೇ ತರಗತಿಯಲ್ಲೇ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿದ್ದರು. ರಾಷ್ಟ್ರೀಯ ಬಾಸ್ಕೆಟ್ಬಾಲ್ ಆಟಗಾರ್ತಿಯಾಗಿ ಎನ್ಸಿಸಿಯಲ್ಲಿ ಗಣರಾಜ್ಯೋತ್ಸವ ಪರೇಡ್ಗೆ ಆಯ್ಕೆಯಾಗಿದ್ದರು. ಮನಿಷಾ 6ನೇ ತರಗತಿಯಲ್ಲಿ ಇರುವಾಗಲೇ ಪೈಲಟ್ ಕನಸು ಕಂಡಿದ್ದು, ಈ ಸಂಬಂಧಿಕರ ಬಳಿ ಮುಕ್ತವಾಗಿ ಹೇಳುತ್ತಿದ್ದರು.
ಏರ್ಪೋರ್ಸ್ನ ಪೈಲಟ್ಗೆ ಆಯ್ಕೆಯಾಗಬೇಕೆಂದು ತಂದೆಯ ಕನಸಾಗಿತ್ತು. ಅದರಂತೆ ಈ ಹಿಂದೆ ಆರ್ಮಿ, ನೇವಿಗೂ ಆಯ್ಕೆಯಾಗಿದ್ದರು ಮನಿಷಾ ನಯವಾಗಿ ಅದರಿಂದ ಹಿಂಜರಿದರು. ಪೈಲಟ್ ಆಗುವ ಇಚ್ಛೆಯಿಂದ ಏರ್ಪೋರ್ಸ್ ಪ್ರಯತ್ನ ಮತ್ತೆ ಮುಂದುವರಿಸಿದರು. ಕೊನೆಗೂ ತಂದೆಯ ಇಚ್ಛೆಯಂತೆ ಕನಸು ಈಡೇರಿದೆ.