ಪುಂಜಾಲಕಟ್ಟೆ: ಮಹಿಳೆಯೋರ್ವರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಆಗುಂತುಕನೊಬ್ಬ ಸರ ಎಳೆದು ಪರಾರಿಯಾದ ಘಟನೆ ಜೂ.15ರಂದು ಕಾವಳಮೂಡೂರು ಗ್ರಾಮದ ಹಂಚಿಕಟ್ಟೆಯಲ್ಲಿ ಸಂಭವಿಸಿದೆ.
ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿಯ ಮಾಂಕು ನಲಿಕೆ ಅವರ ಪತ್ನಿ ಪೂವಮ್ಮ (69) ಅವರು ತನ್ನ ಸೊಸೆ ಮೋಹಿನಿ ಅವರೊಂದಿಗೆ ಕಾರ್ಯಕ್ರಮಕ್ಕೆ ಹೋಗುವ ನಿಮಿತ್ತ, ಸಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಚಿಕಟ್ಟೆ ಕಡೆಯಿಂದ ಸಾಲು ಮರದ ತಿಮ್ಮಕ್ಕ ಉದ್ಯಾನವನ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಮೋಟಾರ್ ಸೈಕಲ್ನಲ್ಲಿ ಬಂದ ವ್ಯಕ್ತಿ ಅವರನ್ನು ದಾಟಿಮುಂದಕ್ಕೆ ಹೋಗಿ, ಮೋಟಾರ್ ಸೈಕಲ್ ನ್ನು ತಿರುಗಿಸಿ ಪೂವಮ್ಮ ಅವರ ಬಳಿ ಬಂದು ಏಕಾಏಕಿಯಾಗಿ ಪೂವಮ್ಮ ಅವರ ಕುತ್ತಿಗೆಗೆ ಕೈ ಹಾಕಿ ಅವರು ಧರಿಸಿದ್ದ ಚಿನ್ನದ ಒಪ್ಪ (ಕೋಟಿಂಗ್ ) ಮಾಡಿದ ಅಂದಾಜು 1,200 ರೂ.ಮೌಲ್ಯದ ಬೆಳ್ಳಿಯ ಸರಗಳೆರಡನ್ನು ಸುಲಿಗೆ ಮಾಡಿ, ಮೋಟಾರ್ ಸೈಕಲ್ ಸಮೇತ ಪರಾರಿಯಾಗಿರುತ್ತಾನೆ.
ಕೃತ್ಯದಿಂದ ಪೂವಮ್ಮ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಆರೋಪಿ ಕಪ್ಪು ಬಣ್ಣದ ನಂಬರ್ ನಮೂದಿಸದ ಬೈಕ್ನಲ್ಲಿ ಬಂದಿದ್ದು, ಬೂದು ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.