ಬಂಟ್ವಾಳ: ಇಲ್ಲಿನ ವಿದ್ಯಾರ್ಥಿಯೋರ್ವ ತಮ್ಮನಿಗೆ ತಿಂಡಿ ತರುತ್ತೇನೆ ಎಂದು ತಿಳಿಸಿ ಪೇಟೆಗೆ ಹೋದವನು ವಾಪಾಸು ಮನೆಗೆ ಬರದೆ ಇರುವ ಘಟನೆ ನಡೆದಿದೆ. ಮನೆಯವರು ಹಾಗೂ ಸಾರ್ವಜನಿಕ ಬಾಲಕನ ಹುಡುಕಾಟ ನಡೆಸುತ್ತಿದ್ದಾರೆ.
ಕಾಣೆಯಾದ ಬಾಲಕನನ್ನು ದ್ಯಾನ್ ಎಂದು ಗುರುತಿಸಲಾಗಿದೆ. ಬಿಸಿರೋಡು ಬಸ್ ನಿಲ್ದಾಣದ ಹಿಂಬದಿಯ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಗಣೇಶ್ ಎಂಬವರ ಮಗ ಎನ್ನಲಾಗಿದೆ. ದ್ಯಾನ್ ಬಂಟ್ವಾಳ ವಿದ್ಯಾಗಿರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿಯಾಗಿದ್ದಾನೆ.
ವಿದ್ಯಾರ್ಥಿ ಸಂಜೆ ಶಾಲೆಯಿಂದ ಮನೆಗೆ ಬಂದವನು ಸ್ಕೌಟ್ ಮತ್ತು ಗೈಡ್ಸ್ ನ ಅಂಗಿ ಮತ್ತು ಚಡ್ಡಿ ಹಾಕಿಕೊಂಡು ಮನೆಯಿಂದ ತೆರಳಿದ್ದಾನೆ. ಗಣೇಶ್ ಅವರು ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ವಿನಾಯಕ ಬೇಕರಿ ನಡೆಸುತ್ತಿದ್ದು, ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದವರು ಊಟ ಮುಗಿಸಿ ಮಲಗಿದ್ದರು. ಇನ್ನು ತಾಯಿ ಬೇಕರಿಗೆ ತೆರಳಿದ್ದರು.
ಸಂಜೆ 5 ಗಂಟೆಗೆ ದ್ಯಾನ್ ತಮ್ಮನ ಜೊತೆ ಶಾಲೆಯಿಂದ ಮನೆಗೆ ಬಂದವನು ಅಲ್ಲಿಂದ ತಿಂಡಿ ತರುತ್ತೇನೆ ಎಂದು ಮನೆಯಿಂದ ಹೊರಗೆ ಹೋಗಿದ್ದಾನೆ. ಹುಡುಗ ರಾತ್ರಿ 8 ಗಂಟೆಯಾಗುತ್ತ ಬಂದರೂ ಮನೆಗೆ ಬಂದಿರದ ಕಾರಣ, ಮನೆಯವರು ಹಾಗೂ ಪರಿಸರದ ಸಾರ್ವಜನಿಕರು ಜೊತೆಯಾಗಿ ಸಿ.ಸಿ.ಕ್ಯಾಮರಾದಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.