ಕಡಬ: ಎರ್ಮಾಳ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರವು ಕಳೆದ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸತೀಶ್ ಅವರದ್ದೆ ಎಂಬುದು ಬಹುತೇಕ ಖಚಿತವಾಗಿದೆ.

ಆಗಸ್ಟ್ 2 ರಂದು ಕುಂತೂರು ಗ್ರಾಮದ ಎರ್ಮಾಳ ನಿವಾಸಿ ಸತೀಶ್(50ವ) ನಾಪತ್ತೆಯಾಗಿದ್ದರು. ಪತಿ ನಾಪತ್ತೆಯಾಗಿ ಎರಡು ತಿಂಗಳುಗಳು ಕಳೆದರೂ ಪತ್ನಿ ದೂರು ನೀಡಿರಲಿಲ್ಲ. ಆದರೆ ಅ.10ರಂದು ನಾಪತ್ತೆಯಾದ ವ್ಯಕ್ತಿಯ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಅನ್ನಡ್ಕ ಎಂಬಲ್ಲಿ ಸಣ್ಣ ಹಳ್ಳವೊಂದರಲ್ಲಿ ಮಾನವನ ತಲೆಬುರುಡೆಯೊಂದು ಪತ್ತೆಯಾಗಿತ್ತು. ತಲೆಬುರುಡೆಯು ನೀರಿನಲ್ಲಿ ಕೊಚ್ಚಿಕೊಂಡು ಬಂದ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆ ಹುಡುಕಾಟ ನಡೆಸಿದ ಸ್ಥಳೀಯರಿಗೆ ಅರೆ ಬರೆ ಅಸ್ತಿ ಪಂಜರವು ಸಿಕ್ಕಿತ್ತು.ಇನ್ನು ಅಸ್ತಿ ಪಂಜರ ಸಿಕ್ಕ ವಿಚಾರ ಪ್ರಚಾರವಾಗುತ್ತಿದ್ದಂತೆ ಎರಡು ತಿಂಗಳುಗಳ ಕಾಲ ನಾಪತ್ತೆಯಾದ ವ್ಯಕ್ತಿಯ ಬಗ್ಗೆ ದೂರು ನೀಡದ ಪತ್ನಿ ಕಡಬ ಠಾಣೆಗೆ ದೂರು ನೀಡಿದ್ದರು.

ಇದೀಗ ಅಸ್ಥಿಪಂಜರ ದೊರೆತ ಸ್ಥಳದಲ್ಲಿ ಬಟ್ಟೆ ಹಾಗೂ ವಾಚ್ ದೊರೆತಿದ್ದು, ಅದು ಸತೀಶ್ ಅವರದ್ದೆ ಎಂದು ಸತೀಶ್ ಅವರ ಪತ್ನಿ ಗೀತಾ ಅವರು ದೃಢಪಡಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಅಸ್ಥಿಪಂಜರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು ಅಲ್ಲಿಂದ ವರದಿ ಬಂದ ಬಳಿಕವೇ ಪೋಲಿಸರು ಅಧಿಕೃತವಾಗಿ ಘೋಷಣೆ ಮಾಡಬಹುದು ಎಂದು ತಿಳಿದು ಬಂದಿದೆ.