ಮಂಗಳೂರು: ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ಗಳನ್ನು ‘ಪುಸ್ತಕ ಗ್ರಾಮ’ಗಳಾಗಿ ಬದಲಾಯಿಸಲು “ಪುಸ್ತಕ ಗೂಡು’ ಎಂಬ ವಿನೂತನ ಪ್ರಯೋಗವು ರಾಜ್ಯದಲ್ಲಿಯೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ.
ಪೈಲೆಟ್ ಯೋಜನೆಯಾಗಿ ಜಿಲ್ಲೆಯ ಏಳು ತಾಲ್ಲೂಕುಗಳ 17 ಗ್ರಾಮಗಳಲ್ಲಿ ‘ಪುಸ್ತಕ ಗೂಡು’ ಅನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ರೂಪಿಸಿದ್ದಾರೆ. ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನದಟ್ಟಣೆ ಇರುವ ಊರಿನ ಪ್ರಮುಖ ಸ್ಥಳಗಳಲ್ಲಿ ಪುಟ್ಟಗೂಡು ರಚಿಸಿ, ಪುಸ್ತಕಗಳನ್ನು ಇಡಲಾಗುತ್ತದೆ. ನಾಗರಿಕರು ಕುತೂಹಲ ದಿಂದ ಪುಸ್ತಕಗಳನ್ನು ಕೈಗೆತ್ತಿಕೊಂಡು, ಕಣ್ಣು ಹಾಯಿಸುತ್ತಾರೆ.ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಗ್ರಂಥಾಲಯ ರೂಪಿಸಲಾಗಿದೆ. ಕಂಪ್ಯೂ ಟರ್, ಇಂಟರ್ನೆಟ್ ಸೌಲಭ್ಯಗಳೂ ಇವೆ. ಇದರ ಮುಂದುವರಿದ ಭಾಗವಾಗಿ ‘ಪುಸ್ತಕ ಗೂಡು’ ಪರಿಕಲ್ಪನೆ ಜಾರಿಗೊಳಿಸಲಾಗಿದೆ.
ಎಲ್ಲ ಪುಸ್ತಕ ಗೂಡುಗಳಿಗೆ ತಗಲುವ ವೆಚ್ಚವನ್ನು ಆಯಾ ಗ್ರಾ.ಪಂ ಮಾಡಲಿದೆ. ಪುಸ್ತಕಗಳನ್ನು ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರು ನೀಡುತ್ತಾರೆ. ಪ್ರತೀ ಗೂಡಲ್ಲಿ ಕನಿಷ್ಠ 30-40 ಪುಸ್ತಕಗಳನ್ನಿರಿಸುವ ಗುರಿ ಇದೆ.
ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಕೊಣಾಜೆ, ಬೆಳ್ಮ, ಬೆಳ್ತಂಗಡಿ ತಾಲೂಕಿನ ಅಳದಂಗಡಿ, ಬಂಟ್ವಾಳ ತಾಲೂಕಿನ ಕೊಳ್ನಾಡು, ಚೆನ್ನೈತ್ತೋಡಿ, ಅರಳ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಬಕ, ಆರ್ಯಾಪು, ಕಡಬ ತಾಲೂಕಿನ ಸುಬ್ರಹ್ಮಣ್ಯ, ಅಲಂಕಾರು, ರಾಮಕುಂಜ, ಸುಳ್ಯ ತಾಲೂಕಿನ ಬೆಳ್ಳಾರೆ, ಮೂಡಬಿದಿರೆ ತಾಲೂಕಿನ ಶಿರ್ತಾಡಿ, ತೆಂಕಮಿಜಾರು, ಪುತ್ತಿಗೆ ಆಯ್ಕೆಯಾದ ಗ್ರಾಮಗಳಾಗಿವೆ.