ದಾವಣಗೆರೆ: ಎಟಿಎಂಗೆ ಬರುತ್ತಿದ್ದ ವೃದ್ದರನ್ನ ವಂಚಿಸುತ್ತಿದ್ದ ಕಿಲಾಡಿಯನ್ನು ಬಂಧಿಸಿ 8.58 ಲಕ್ಷ ರೂಪಾಯಿ ನಗದು ಹಾಗೂ 78 ಎಟಿಎಂ ಕಾರ್ಡ್ ಗಳನ್ನು ವಶ ಪಡಿಸಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಯೋಗಾನಂದ ಬಣಕಾರ (47) ಬಂಧಿತ ಆರೋಪಿ. ಇಂಗ್ಲೀಷ್ ವಿಷಯದಲ್ಲಿ ಎಂಎ, ಪಿಎಚ್ ಡಿ ಪದವಿ ಪಡೆದಿದ್ದಾನೆ ಆರೋಪಿ. ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದ ಚಿತ್ರಮಂದಿರಯೊಂದರ ಮಾಲೀಕನಾಗಿದ್ದಾನೆ.
ದಾವಣಗೆರೆ ನಗರದ ಬಸವನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಯೋಗಾನಂದನನ್ನು ಬಂಧಿಸಿದ್ದಾರೆ. ಎಟಿಎಂಗೆ ಬರುವ ವೃದ್ಧರನ್ನು ಟಾರ್ಗೆಟ್ ಮಾಡಿ ಅವರಿಗೆ ದುಡ್ಡು ತೆಗೆದು ಕೊಡುವ ನೆಪದಲ್ಲಿ ಎಟಿಎಂ ಹಾಗೂ ಪಿನ್ ನಂಬರ್ ಪಡೆದುಕೊಳ್ಳುತ್ತಿದ್ದ ಆರೋಪಿ. ನಂತರ ನಿಮ್ಮ ಹಣ ಬರುತ್ತಿಲ್ಲ ಎಂದು ಹೇಳಿ, ಅದೇ ರೀತಿಯ ತನ್ನ ಬಳಿ ಇರುವ ಮತ್ತೊಂದು ಎಟಿಎಂ ಕೊಟ್ಟು ಕಳುಹಿಸುತ್ತಿದ್ದ.
ಕಳೆದ ನವೆಂಬರ್ 30 ರಂದು ದಾವಣಗೆರೆ ನಗರದ ನಿವಾಸಿ 75 ವರ್ಷದ ಪಾಪಣ್ಣ ಎಂಬುವರಿಗೆ ವಂಚಿಸಿ ಸಿಕ್ಕಿ ಬಿದ್ದಿದ್ದ ಆರೋಪಿ ಯೋಗಾನಂದ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ವಿಜಯನಗರ ಸೇರಿ 18 ಜನಕ್ಕೆ ವಂಚನೆ ಮಾಡಿದ್ದ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಹಣ ಕಳೆದುಕೊಂಡ 18 ಜನ ವೃದ್ಧರಿಗೆ ಸಂಪೂರ್ಣ ಹಣ ವಾಪಸ್ಸು ಕೊಡಿಸಿದ್ದಾರೆ ಪೊಲೀಸರು.