ಕಿನ್ನಿಗೋಳಿ: ಇಲ್ಲಿನ ಸಮೀಪದ ಎಳತ್ತೂರು ದೇವಸ್ಥಾನದ ದೇವರ ಗುಂಡಿ ಸಂಕದ ಬಳಿಯಲ್ಲಿ ಹುಲ್ಲು ಕತ್ತರಿಸುತ್ತಿದ್ದ ವ್ಯಕ್ತಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕಟೀಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರು ಎಳತ್ತೂರು ಕಲ್ಕರೆ ಸ್ಥಳೀಯ ನಿವಾಸಿ ಲಿಗೋರಿ ಪಿರೇರಾ. ಅವರು ಹೈನುಗಾರರಾಗಿದ್ದು, ದನಗಳಿಗೆ ಮೇವು ತರಲು ಹೋಗಿದ್ದ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿದೆ. ಲಿಗೋರಿ ಧೈರ್ಯದಿಂದ ಚಿರತೆಯನ್ನು ಎದುರಿಸಿದ್ದು, ಕೂಡಲೇ ಅದು ಪರಾರಿಯಾಗಿದೆ. ದಾಳಿಯಲ್ಲಿ ಲಿಗೋರಿಯವರ ಮುಖ, ಕೈ, ಕಾಲಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಇದೇ ಪ್ರದೇಶದಲ್ಲಿ 10 ದಿನಗಳ ಹಿಂದೆ ಜಯಂತ ಅವರ ಬೈಕಿಗೆ ದೊಡ್ಡ ಗಾತ್ರದ ಚಿರತೆ ಅಡ್ಡ ಬಂದಿದ್ದು, ಈ ಭಾಗದಲ್ಲಿ ವಾರದ ಹಿಂದೆಯೂ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾಗಿದೆ. ಸ್ಥಳೀಯರಾದ ಶಿವಪ್ರಸಾದ್ ಭಟ್ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸ್ಥಳೀಯರಾದ ಪ್ರಸಾದ್ ಎಳತ್ತೂರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.