ಪುಂಜಾಲಕಟ್ಟೆ: ಸಿದ್ದಕಟ್ಟೆ ಸಮೀಪದ ಕೊನೆರಬೆಟ್ಟುನಲ್ಲಿ ರವಿವಾರದಂದು ಸಿದ್ದಕಟ್ಟೆ ಬಂಟರ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ದೈವಗಳ ಕಾರಣಿಕದಿಂದ ಸಂಭವಿಸಬಹುದಾದ ಬಹುದೊಡ್ಡ ಅಪಾಯ ತಪ್ಪಿಹೋದ ಘಟನೆ ನಡೆದಿದೆ.
ಪ್ರತಿ ವರ್ಷದಂತೆ ಸಿದ್ದಕಟ್ಟೆ ಬಂಟರ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾ ಕೂಟ ಆಯೋಜಿಸಿದ್ದು, ಕೆಸರುಗದ್ದೆ ಕೂಟದ ಮೊದಲು ಕೊನೆರಬೆಟ್ಟು ಸ್ಥಳ ದೈವಗಳಿಗೆ ಪರ್ವ ನಡೆಸಿ ಪ್ರಾರ್ಥನೆ ಮಾಡುವುದು ವಾಡಿಕೆ. ಈ ಬಾರಿಯೂ ಕೆಸರುಗದ್ದೆ ಕೂಟದ ಮೊದಲು ಪ್ರಾರ್ಥನೆ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ರೀಡಾ ಆಯೋಜಕರ ಗಮನಕ್ಕೆ ಕ್ರೀಡಾಕೂಟ ನಡೆಯುವ ಗದ್ದೆಯ ಮೇಲ್ಭಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದು ಕಂಡಿದ್ದು, ಕ್ರೀಡಾಕೂಟದಲ್ಲಿ ವಾಲಿಬಾಲ್ ಮೊದಲಾದ ಪಂದ್ಯಾಟಗಳಿರುವ ಕಾರಣ ಕ್ರೀಡಾಕೂಟ ನಡೆಸುವ ದಿನ ಈ ಲೈನ್ ಸ್ಥಗಿತಗೊಳಿಸುವಂತೆ ಮೆಸ್ಕಾಂ ಇಲಾಖೆಗೆ ಮನವಿ ಮಾಡಿ ಲೈನ್ ಕಟ್ ಮಾಡಿಸಿದ್ದರು.
ಆದರೆ ವಿಚಿತ್ರವೆನ್ನುವಂತೆ ಜು.21ರ ರವಿವಾರದಂದು ಕ್ರೀಡಾಕೂಟ ನಡೆಯುವಾಗ ಭಾರೀ ಗಾಳಿ ಬೀಸಿ ವಿದ್ಯುತ್ ಕಂಬ ತುಂಡಾಗಿ ತಂತಿ ಸಹಿತ ಗದ್ದೆಗೆ ಬಿದ್ದಿದೆ. ಗದ್ದೆಯಲ್ಲಿ ಮಕ್ಕಳ ಸಹಿತ ಸುಮಾರು ಐನೂರರಷ್ಟು ಜನ ಸೇರಿದ್ದರು. ಆದರೆ ಮೊದಲೇ ಲೈನ್ ಕಟ್ ಮಾಡಿದ್ದುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಇದೀಗ ಆಯೋಜಕರಿಗೆ ಜಾಗದ ದೈವಗಳು ಮೊದಲೇ ಸೂಚನೆ ನೀಡಿದ್ದಿರಬಹುದು ಎಂದು ಎಲ್ಲೆಡೆಯೂ ವೈರಲ್ ಆಗಿದೆ.
ಈ ಕುರಿತಂತೆ ಆಯೋಜಕರು ತುಳುನಾಡಿನ ದೈವದ ಕಾರಣಿಕ ಇರುವುದಕ್ಕೆ ಇದು ಸ್ಪಷ್ಟ ನಿದರ್ಶನವೆಂದು ತಿಳಿಸಿದ್ದಾರೆ. ಈ ಘಟನೆ ಇದೀಗ ಸಾಕಷ್ಟು ವೈರಲ್ ಆಗಿದೆ.