ಕುಂದಾಪುರ : ಇಲ್ಲಿನ ನಾಡ ಗ್ರಾಮದ ಬಡಾಕೆರೆಯ ಸೌಪರ್ಣಿಕ ನದಿಗೆ ನಿರ್ಮಿಸಲಾದ ರೈಲ್ವೇ ಮೇಲ್ಸೇತುವೆಯಲ್ಲಿ ಚಿರತೆಯೊಂದು ರೈಲು ಢಿಕ್ಕಿ ಯಾಗಿ ಸಾವನ್ನಪ್ಪಿದ ಘಟನೆ ಬುಧವಾರದಂದು ಬೆಳಗ್ಗೆ ಸುಮಾರು 5 ಗಂಟೆಗೆ ಸಂಭವಿಸಿದೆ.
ಸಾವನ್ನಪ್ಪಿದ ಚಿರತೆಗೆ ಗಂಡಾಗಿದ್ದು, ಐದು ವರ್ಷ ಪ್ರಾಯವಾಗಿತ್ತು ಎನ್ನಲಾಗಿದೆ. ಈ ಭಾಗದಲ್ಲಿ ಅರಣ್ಯ ಪ್ರದೇಶ ಹಾಗೂ ಗೇರು ಪ್ಲಾಂಟೇಶನ್ ಇರುವ ಕಾರಣದಿಂದಾಗಿ ಕಾಡಿನಿಂದ ಆಹಾರ ಅರಸಿಕೊಂಡು ಬಂದಿದ್ದು, ರೈಲ್ವೇ ಹಳಿ ದಾಟುವಾಗ ಈ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ.
ಸ್ಥಳೀಯರು ಘಟನೆಯ ಕುರಿತು ಅರಣ್ಯ ಇಲಾಖೆಯವರಿಗೆ ಬುಧವಾರದಂದು ಬೆಳಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಎಸಿಎಫ್ ಪ್ರಕಾಶ್ ಪೂಜಾರಿ, ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಡಿಆರ್ಎಫ್ಒ ಮುರುಗನ್, ಬೀಟ್ ಫಾರೆಸ್ಟರ್ ರಾಮಪ್ಪ ಹಾಗೂ ಸಿಬಂದಿ ಚಿರತೆಯ ಮೃತದೇಹ ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರದಲ್ಲಿ ಕುಂದಾಪುರ ವಲಯ ಅರಣ್ಯ ಇಲಾಖೆಯ ವಂಡ್ಸೆ ಡಿಪ್ಪೋದಲ್ಲಿ ಚಿರತೆಯ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ತಿಳಿದು ಬಂದಿದೆ.