
ಉಡುಪಿ: ಅಲೆಮಾರಿಯಂತೆ ತಿರುಗುತ್ತಾ ಭಿಕ್ಷಾಟನೆ ಮಾಡುತ್ತಿದ್ದ ಯುವಕನೋರ್ವನನ್ನು ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಮತ್ತೆ ಮನೆಗೆ ಸೇರಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ತನ್ನ 25ನೇ ವಯಸ್ಸಿನಲ್ಲಿ ಮನೆಬಿಟ್ಟು ಹೋಗಿದ್ದ ಪ್ರಶಾಂತ್ ಶೆಟ್ಟಿ (37) ,ಮೂಲತಃ ಕುಂದಾಪುರ ತಾಲೂಕಿನ ವಕ್ವಾಡಿ ತೆಂಕಬೆಟ್ಟು ನಿವಾಸಿ. ಕಾಸರಗೋಡು, ದ.ಕ.ಜಿಲ್ಲೆಯ ವಿವಿದೆಡೆ ಕೂಲಿ ಹಾಗೂ ಹೋಟೆಲ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತ ಕಳೆದ 3ವರ್ಷಗಳಿಂದ ಉಡುಪಿ ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರಲ್ಲಿ ಭಿಕ್ಷೆ ಯಾಚಿಸುತ್ತಿದ್ದ.
ರಾತ್ರಿಯ ಹೊತ್ತು ಯುವಕ ಅನುಮಾನಸ್ಪದವಾಗಿ ತಿರುಗಾಡುವ ಸಮಯದಲ್ಲಿ ಗಸ್ತು ಪೋಲಿಸರ ಲಾಠಿಯ ರುಚಿಯನ್ನು ಹಲವಾರು ಬಾರಿ ಕಂಡಿದ್ದನು. ಮನೆ ಸೇರುವಂತೆ ಪೊಲೀಸರು ಬುದ್ದಿ ಹೇಳಿ ಪ್ರಯಾಣದ ಖರ್ಚಿಗೆ ಹಣವನ್ನು ನೀಡಿದ್ದರು. ಆದರೆ ಯುವಕ ಮಾತ್ರ ಅಲೆಮಾರಿಯಂತೆ ದಿನ ಕಳೆಯುತ್ತಿದ್ದನು. ರಾತ್ರಿ ಸಮಯ ಬಸ್ಸು ನಿಲ್ದಾಣ, ಅಂಗಡಿ ಜಗುಲಿಯಲ್ಲಿ ಕಾಲ ಕಳೆಯುತ್ತಿದ್ದ. ಯುವಕನ ಮಾಹಿತಿ ಪಡೆದ ಜಿಲ್ಲಾ ನಾಗರಿಕ ಸಮಿತಿ ಸದಸ್ಯ ನಿತ್ಯಾನಂದ ಒಳಕಾಡು, ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಯಲ್ಲಿದೆ, ಹೀಗಾಗಿ ಭಿಕ್ಷೆ ಬೇಡುವುದು ಅಪರಾಧ ಎಂದು ಕಿವಿಮಾತು ಹೇಳಿ ಮನವೊಲಿಸಿದರು.
ಆದರೆ ಈತನಿಗೆ ಮನೆ ಕುಂದಾಪುರದಲ್ಲಿದೆ ಎಂಬುದು ಬಿಟ್ಟರೆ ವಿಳಾಸ ನೆನಪಿರಲಿಲ್ಲ. ಹೀಗಾಗಿ ಈತನ ಫೋಟೋವನ್ನು ಕುಂದಾಪುರದ ಸಾಮಾಜಿಕ ಕಾರ್ಯಕರ್ತರಿಗೆ ನೀಡಿ ಸಹಾಯ ಯಾಚಿಸಲಾಗಿತ್ತು. ವಕ್ವಾಡಿಯ ಸಾಮಾಜಿಕ ಕಾರ್ಯಕರ್ತೆ ಅಂಬಿಕಾ ಆತನನ್ನು ಗುರುತು ಹಿಡಿದು ತಾಯಿ ಬಳಿಗೆ ತಲುಪಿಸಲು ನೆರವಾಗಿದ್ದಾರೆ.


