ಕುವೈತ್ ದೇಶದ ಸೂಪರ್ ಮಾರ್ಕೆಟ್ನಲ್ಲಿ ಮಾರಾಟಕ್ಕೆ ಇರಿಸಲಾಗಿದ್ದ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ತೆರವುಗೊಳಿಸಲಾಗಿದೆ. ಇನ್ನೊಂದೆಡೆ ಇರಾನ್ ದೇಶವು ತನ್ನ ದೇಶದಲ್ಲಿ ಇರುವ ಭಾರತೀಯ ರಾಯಭಾರಿಗೆ ಬುಲಾವ್ ನೀಡಿದ್ದು, ಪ್ರತಿಭಟನೆ ವ್ಯಕ್ತಪಡಿಸುವ ದೇಶಗಳ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದೆ. ಬಿಜೆಪಿ ಮಾಜಿ ವಕ್ತಾರರು ಪ್ರವಾದಿ ಮೊಹಮ್ಮದರ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆ ಖಂಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಹೋರಾಟ ಈ ಮೂಲಕ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕುವೈತ್ನ ಅಲ್ – ಅರ್ದಿಯಾ ಸಹಕಾರ ಸಂಘದ ಸೂಪರ್ ಮಾರ್ಕೆಟ್ನಲ್ಲಿ ಭಾರತದ ಉತ್ಪನ್ನಗಳಾದ ಟೀ ಮತ್ತಿತರ ಸರಕುಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. ಆದರೆ, ಭಾರತದಲ್ಲಿ ಬಿಜೆಪಿ ವಕ್ತಾರರು ಪ್ರವಾದಿ ಮೊಹಮ್ಮದರ ವಿರುದ್ಧ ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆ, ಕುವೈತ್ ಜನರನ್ನು ಕೆರಳಿಸಿದೆ. ಈ ಕುರಿತ ಸುದ್ದಿ ಹರಡಿದ ಕೂಡಲೇ ಸೂಪರ್ ಮಾರ್ಕೆಟ್ನಲ್ಲಿ ಮಾರಾಟಕ್ಕೆ ಇರಿಸಲಾಗಿದ್ದ ಸರಕುಗಳನ್ನು ಟ್ರಾಲಿಗಳ ಮೂಲಕ ತೆರವು ಮಾಡಲಾಗಿದೆ. ಭಾರತವು ಇಸ್ಲಾಮೋಫೋಬಿಯಾ ಹರಡುತ್ತಿದೆ ಎಂದು ಕುವೈತ್ ಆರೋಪಿಸಿದೆ.
ಸೌದಿ ಅರೇಬಿಯಾ, ಕತಾರ್ ಸೇರಿದಂತೆ ಹಲವು ಗಲ್ಫ್ ದೇಶಗಳು, ಈಜಿಪ್ಟ್ನ ಕೈರೋದಲ್ಲಿ ಇರುವ ಅಲ್ ಅಜರ್ ವಿವಿ ಸೇರಿದಂತೆ ಹಲವರು ಭಾರತದ ವಿರುದ್ಧ ಖಂಡನೆ ವ್ಯಕ್ತಪಡಿಸಿದ್ದು, ಬಿಜೆಪಿ ವಕ್ತಾರೆ ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆ ಇದೀಗ ಭಾರೀ ಸದ್ದು ಮಾಡುತ್ತಿದೆ. ನೂಪುರ್ ಶರ್ಮಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದ್ದರೂ ಕೂಡಾ ಗಲ್ಫ್ ರಾಷ್ಟ್ರಗಳ ಹೋರಾಟ ನಿಂತಿಲ್ಲ. ಇನ್ನು ಕುವೈತ್ ಹೊರ ವಲಯದ ಸೂಪರ್ ಮಾರ್ಕೆಟ್ನಲ್ಲೂ ಕೂಡಾ ಭಾರತದಿಂದ ಆಮದಾಗಿದ್ದ ಅಕ್ಕಿ, ಸಾಂಬಾರ ಪದಾರ್ಥ ಹಾಗೂ ಮೆಣಸಿನ ಕಾಯಿಗಳ ಮಾರಾಟ ನಿರ್ಬಂಧಿಸಿ, ಶೆಲ್ಫ್ಗಳಿಗೆ ಕವರ್ ಸುತ್ತಲಾಗಿದೆ. ಅಷ್ಟೇ ಅಲ್ಲ, ಭಾರತದ ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ ಎಂದು ಚೀಟಿ ಅಂಟಿಸಲಾಗಿದೆ.