ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಸಮೀಪವಿರುವ ಪಲ್ಗುಣಿ ನದಿಗೆ ಸ್ನಾನಕ್ಕೆಂದು ಹೋದವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ನಡೆದಿದೆ.
ಕಾಶಿಪಟ್ಣ ಗ್ರಾಮದ ಪಿಂಟೊ ನಗರ ನಿವಾಸಿ ಮೇಲ್ವಿನ್ ಪಿಂಟೋರವರ ಪುತ್ರ ಮಾರ್ಟಿನ್ ಪಿಂಟೊ(15) ಮೃತ ದುರ್ದೈವಿ. ಅ.19ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಸಮೀಪವಿರುವ ಪಲ್ಗುಣಿ ನದಿಗೆ ಸ್ನಾನಕ್ಕೆಂದು ಹೋದವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇಂದು ಮೊರಂತಕಾಡು ಸೇತುವೆಯ ಬಳಿ ಪತ್ತೆಯಾಗಿದೆ.
ಕಾಶಿಪಟ್ಣ ಗ್ರಾಮದ ಪಿಂಟೊ ನಗರ ನಿವಾಸಿ ಮೇಲ್ವಿನ್ ಪಿಂಟೋರವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು , ಇವರ ಪತ್ನಿ ಹೆಲನ್ ಪಿಂಟೋ ಹಾಗೂ ಮಕ್ಕಳಾದ ಮಾರ್ಟಿನ್ ಪಿಂಟೋ ಮತ್ತು ಮೆಲ್ ರಾಯ್ ಪಿಂಟೋರವರೊಂದಿಗೆ ವಾಸ್ತವ್ಯವಿದ್ದರು.
ಹೆಲನ್ ಪಿಂಟೊ ರವರು ಅ.19 ರಂದು ಮಧ್ಯಾಹ್ನ ಔಷಧಿ ತರಲೆಂದು ನೆರೆಮನೆಯ ಮೆಲ್ವಿನ್ ರೋಡ್ರಿಗಸ್ ಮತ್ತು ಸೆಲಿನ್ ರೋಡ್ರಿಗಸ್ ರೊಂದಿಗೆ ಮೂಡಬಿದ್ರೆಯ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಇಬ್ಬರೂ ಮಕ್ಕಳು ಮನೆಯಲ್ಲಿದ್ದರು. ಸಂಜೆ ತಾಯಿ ಮನೆಗೆ ಮರಳಿದ ವೇಳೆ ಮಗ ಮಾರ್ಟಿನ್ ರವರು ಮನೆಯಲ್ಲಿರದೆ ನಾಪತ್ತೆಯಾಗಿದ್ದರು.
ಬಾಲಕನಿಗಾಗಿ ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಟ ನಡೆಸಿದ್ದ ವೇಳೆ ಮನೆಯ ಸಮೀಪದ ಮೊರಂತಕಾಡು ಸೇತುವೆ ಕೆಳಗಿರುವ ಮುರಿದ ಹಳೆಯ ಸೇತುವೆ ಬಳಿ ಬಾಲಕನ ಬಟ್ಟೆ, ಬೈರಸು ಮತ್ತು ಚಪ್ಪಲಿ ಇದ್ದು ಹಾಗೂ ಸಲ್ಪ ದೂರದಲ್ಲಿ ಅವರ ಬರ್ಮೊಡ ಚಡ್ಡಿ ಇರುವುದು ಕಂಡುಬಂದಿತ್ತು. ಅಲ್ಲದೇ ಮನೆಯಲ್ಲಿ ಬಟ್ಟೆ ಒಣಗಲು ಹಾಕುವ ನೈಲಾನ್ ದಾರವನ್ನು ಹೊಳೆಯ ನೀರಿನಲ್ಲಿರುವ ಗಿಡಕ್ಕೆ ಕಟ್ಟಿದ್ದು ಅದರ ಇನ್ನೊಂದು ತುದಿ ಸೇತುವೆ ಮೇಲೆ ಇತ್ತೆನ್ನಲಾಗಿದೆ.
ಈ ಬಗ್ಗೆ ಬಾಲಕನ ತಾಯಿ ಕಾಣೆಯಾದ ತಮ್ಮ ಮಗನನ್ನು ಹುಡುಕಿ ಕೊಡುವಂತೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಮಗ ಸ್ನಾನಕ್ಕೆಂದು ನದಿ ನೀರಿಗೆ ಇಳಿದು ಹೊಳೆಯಲ್ಲಿ ಮುಳುಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ವೇಣೂರು ಪೊಲೀಸರು ಇಂದು ಆಗ್ನಿಶಾಮಕ ದಳ ಮತ್ತು ಮುಳುಗು ತಜ್ಞರಿಂದ ಮೊರಂತಕಾಡು ಸೇತುವೆಯ ಬಳಿ ಶೋಧ ಕಾರ್ಯ ನಡೆಸಿದ ವೇಳೆ ಬಾಲಕನ ಮೃತದೇಹ ಪತ್ತೆಯಾಗಿರುತ್ತದೆ.
ಶಿರ್ತಾಡಿಯ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಾರ್ಟಿನ್ ಪಿಂಟೋರವರು ತಂದೆ ಮೇಲ್ವಿನ್ ಪಿಂಟೋ, ತಾಯಿ ಹೆಲನ್ ಪಿಂಟೋ, ಓರ್ವ ಸಹೋದರ ಮೆಲ್ ರಾಯ್ ಪಿಂಟೋ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.


