ಬೆಳ್ತಂಗಡಿ: ಮಾಜಿ ಶಾಸಕ ವಸಂತ ಬಂಗೇರ ನಿಧನದ ಬಳಿಕ ಕಾನೂನು ಪ್ರಕಾರ ಮಾಲೀಕತ್ವ ಬದಲಾಯಿಸದ ಕಾರಣದಿಂದ ಬೆಳ್ತಂಗಡಿ ಅಬಕಾರಿ ಇಲಾಖೆ ವೈನ್ಸ್ ಶಾಪ್ ಗೆ ಬೀಗ ಜಡಿದು ಸಿಲ್ ಮಾಡಿದ್ದಾರೆ.
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿರುವ ಗುರುನಾರಾಯಣ ಟ್ರಸ್ಟ್ ನ ಸೇರಿದ ಕಟ್ಟಡದ ನೆಲಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ದಿವಂಗತ ಮಾಜಿ ಶಾಸಕ ಕೆ.ವಸಂತ ಬಂಗೇರರ ಮಾಲೀಕತ್ವದ ‘3 ಸ್ಟಾರ್ ವೈನ್ಸ್ ಶಾಪ್’ ಗೆ ಮಾಲೀಕತ್ವ ಬದಲಾವಣೆ ಮಾಡದ ಕಾರಣದಿಂದ ಬೆಳ್ತಂಗಡಿ ಅಬಕಾರಿ ಇಲಾಖೆ ಜೂ.22 ರಂದು ಸಂಜೆ 6 ಗಂಟೆಗೆ ಬೀಗ ಹಾಕಿ ಸಿಲ್ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ ಅಬಕಾರಿ ಕಾನೂನು ಪ್ರಕಾರ, ಅಬಕಾರಿ ಮಧ್ಯ ಮಾರಾಟ ಮಾಡುವ ಮಾಲೀಕ ಮರಣದ ಬಳಿಕ 45 ದಿನದ ಒಳಗಡೆ ಕುಟುಂಬದ ಪತ್ನಿ ಅಥವಾ ಮಕ್ಕಳ ಹೆಸರಿಗೆ ಮಾಲೀಕತ್ವ ಬದಲಾವಣೆ ಮಾಡಿಕೊಂಡು ಲೈಸನ್ಸ್ ರಿನಿವಲ್ ಮಾಡಿಸುವ ಹಕ್ಕು ಇದೆ. ಆದರೆ 45 ದಿನ ಕಳೆದರೂ ಮಾಲೀಕತ್ವ ಬದಲಾವಣೆ ಮಾಡದ ಕಾರಣ ಬೆಳ್ತಂಗಡಿ ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ್ ಕಾನೂನು ಪ್ರಕಾರ ವೈನ್ಸ್ ಶಾಪ್ ಗೆ ಬೀಗ ಹಾಕಿ ಸಿಲ್ ಮಾಡಿದ್ದಾರೆ.
ವಸಂತ ಬಂಗೇರ ನಿಧನದ ಬಳಿಕ, ಅಬಕಾರಿ ಕಾನೂನಿನ ಪ್ರಕಾರ ಅಬಕಾರಿ ಲೈಸನ್ಸ್ ಪಡೆದ ಮಾಲೀಕ ಮರಣದ 45 ದಿನದ ಒಳಗಡೆ ಬಂಗೇರ ಪತ್ನಿ ಸುಜಿತಾ.ವಿ.ಬಂಗೇರ ಅವರ ಹೆಸರಿಗೆ ವೈನ್ಸ್ ಶಾಪ್ ಮಾಲೀಕತ್ವ ಬದಲಾವಣೆಗೆ ಪತಿ ನಿಧನದ ಕೆಲ ದಿನದಲ್ಲಿಯೇ ಮಂಗಳೂರು ಅಬಕಾರಿ ಡಿಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಕುಟುಂಬದಲ್ಲಿ ಆಸ್ತಿ-ಪಾಸ್ತಿಗಳ ವಿಚಾರಗಳಲ್ಲಿ ಅಂತರಿಕ ಕಲಹಗಳು ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಜಿದ್ದಾಜಿದ್ದಿಯಿಂದ ಕುಟುಂಬದ ಉಳಿದ ಮೂವರ ಹೆಸರಿನಲ್ಲಿ ವೈನ್ಸ್ ಶಾಪ್ ಲೈಸೆನ್ಸ್ ಮಾಲೀಕತ್ವ ಮಾಡಬೇಕೆಂಬ ಹಠಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಲೈಸನ್ಸ್ ಮಾಲೀಕತ್ವ ಬದಲಾವಣೆಗೆ ದಿನ ಕಳೆಯುತ್ತಿದೆ. ಇದರಿಂದ ಬೆಳ್ತಂಗಡಿ ಅಬಕಾರಿ ಇಲಾಖೆ 46 ನೇ ದಿನ ವೈನ್ಸ್ ಶಾಪ್ ಗೆ ಬೀಗ ಹಾಕಿದ್ದಾರೆ ಎನ್ನುವ ಮಾತುಗಳು ವಸಂತ ಬಂಗೇರರ ಕುಟುಂಬದ ಆಪ್ತ ವಲಯದಿಂದ ಕೇಳಿಬರುತ್ತಿದೆ.