ಉಪ್ಪಿನಂಗಡಿ: ಉಪ್ಪಿನಂಗಡಿ: ಗ್ರಾಮ ಪಂಚಾಯತ್ ಸಿಬ್ಬಂದಿ ಪತಿ ಹಾಗೂ ಇತರರು ಗ್ರಾ.ಪಂ. ಸದಸ್ಯನ ಮೇಲೆ ಹಲ್ಲೆ ನಡೆಸಿರುವ ಘಟನೆ ಉಪ್ಪಿನಂಗಡಿಯ ಹಿರೇಬಂಡಾಡಿ ಗ್ರಾ.ಪಂ. ಆವರಣದಲ್ಲಿ ನಡೆದಿದೆ.
ಈ ಬಗ್ಗೆ ಹಲ್ಲೆಗೊಳಗಾದ ಹಿರೇಬಂಡಾಡಿ ಗ್ರಾ.ಪಂ.ನ ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಗುತುವಾರ ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಸಾಮಾನ್ಯ ಸಭೆ ನಿಗದಿಯಾಗಿತ್ತು. ಸಭೆ ಮುಗಿಸಿ ನಾನು ಹೊರಗಡೆ ಬರುತ್ತಿದ್ದಂತೆಯೇ ಇಲ್ಲಿನ ಗ್ರಾ.ಪಂ. ಸಿಬ್ಬಂದಿಯ ಪತಿ ನೋಣಯ್ಯ ಗೌಡ ಎಂಬಾತ ತನಗೆ ಹಲ್ಲೆ ನಡೆಸಿದ್ದು, ಈತನಿಗೆ ಐದು ಮಂದಿ ಗ್ರಾ.ಪಂ. ಸದಸ್ಯರು ಸಹಕಾರ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಗ್ರಾ.ಪಂ.ನ ಕೆಲವರು ಪ್ರವಾಸ ತೆರಳಿದ್ದು, ಈ ವೇಳೆ ತೆಗೆದ ಪೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ನಾನೇ ವೈರಲ್ ಮಾಡಿದ್ದೆಂದು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಅಲ್ಲಿ ಮಾತುಕತೆಯ ಮೂಲಕ ವಿವಾದ ಬಗೆ ಹರಿದಿದ್ದು, ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಾನು ಕ್ಷಮಾಪಣೆಯನ್ನೂ ಕೇಳಿದ್ದೇನೆ. ಈ ವಿಷಯವನ್ನು ಇಲ್ಲಿಗೆ ಮುಗಿಸಿಬಿಡಬೇಕೆಂದೂ ಸಭೆಯಲ್ಲಿ ಚರ್ಚೆ ನಡೆದಿದೆ.
ಅದೆಲ್ಲಾ ಆದ ಬಳಿಕ ಸಭೆ ಮುಗಿಸಿ ಹೊರ ಬಂದಾಗ ಇದೇ ವಿಷಯಕ್ಕೆ ಸಂಬಂಧಿಸಿ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೂ ದೂರು ನೀಡಿದ್ದೇನೆ ಎಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗ್ರಾ.ಪಂ. ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ ಮಾಧ್ಯಮಕ್ಕೆ ತಿಳಿಸಿದ್ದಾರೆ.