ಹೈದರಾಬಾದ್: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಹೈದರಾಬಾದ್ ನಲ್ಲಿ ತೆಲಂಗಾಣದ ಸಚಿವ ಮತ್ತು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಪುತ್ರ ಕೆ.ಟಿ. ರಾಮ ರಾವ್ ಅವರನ್ನು ಭೇಟಿ ಮಾಡಿದ್ದಾರೆ. ನಿನ್ನೆ ರಾತ್ರಿಯೇ ಹೈದರಾಬಾದ್ ಗೆ ತೆರಳಿರುವ ಕುಮಾರಸ್ವಾಮಿ ಅವರಿಗೆ ತೆಲಂಗಾಣ ಸರ್ಕಾರದಿಂದ ರಾಜ್ಯ ಅತಿಥಿ ಗೌರವದ ಮೂಲಕ ಸ್ವಾಗತಿಸಲಾಗಿತ್ತು.
ಇಂದು ಬೆಳಗ್ಗೆ ಹೈದರಾಬಾದ್ ನಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ರಾಮ ರಾವ್ ಅವರೊಂದಿಗೆ ಉಪಹಾರ ಸೇವಿಸಿದ ಕುಮಾರಸ್ವಾಮಿ, ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಸಿಎಂ ಚಂದ್ರಶೇಖರ ರಾವ್ ಜೊತೆ ಮಾತುಕತೆ ನಡೆಸಲಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿಗೆ ಅಗಮಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ಬಂದು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಮಾತುಕತೆ ನಡೆಸಿದ್ದರು. ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆ ಕುರಿತ ಚರ್ಚೆಯ ಸಂದರ್ಭದಲ್ಲಿ ಇಂದಿನ ಚಂದ್ರಶೇಖರ ರಾವ್ ಮತ್ತು ಕುಮಾರಸ್ವಾಮಿ ಭೇಟಿ ಮಹತ್ವ ಪಡೆದಿದೆ.
ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ, ಶೀಘ್ರದಲ್ಲೇ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನೂ ಭೇಟಿ ಮಾಡುವ ಸಾಧ್ಯತೆ ಇದೆ.