ಪುತ್ತೂರು: ರೈತ ಮಿತ್ರ ಸ್ವಾವಲಂಬಿ ಆಪ್ ನ ದೇಶದಲ್ಲೆ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಗಿದೆ. ಈ ಮಹತ್ವಕಾಂಕ್ಷಿ ಆಪ್ ಬಳಸಿಕೊಂಡು ಇಲ್ಲಿನ ಕೆಲ ನಾಗರೀಕರು ತಮ್ಮ ಜಮೀನಿನ ನಕ್ಷೆ ತಾವೇ ಮಾಡಿಕೊಂಡಿದ್ದಾರೆ.
ಮೊದಲೆಲ್ಲಾ ಜಮೀನಿನ ನಕ್ಷೆಗಾಗಿ ಕನಿಷ್ಟ 8 ರಿಂದ 10 ತಿಂಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಸ್ವಾವಲಂಬಿ ಆಪ್ ಬಿಡುಗಡೆ ಮಾಡಿತ್ತು. ಜಾಗ ಮಾರಾಟ- ಖರೀದಿ ಮಾಡುವವರು ಸ್ವಯಂ ಸರ್ವೆ ಮಾಡಿ, ಸ್ವಂತ ನಕ್ಷೆ ಸಿದ್ಧಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ.
ಸ್ವಾವಲಂಬಿ ಆಪ್ನ ಬಳಕೆ ಹೇಗೆ?
ನಾಗರಿಕರು rdservices.karnataka.gov.in ವೆಬ್ ಸೈಟ್ ಹೋಗಿ ಸ್ವಾವಲಂಬಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಈ ವೇಳೆ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನಮೊದಿಸಲು ಅದು ಸೂಚಿಸುತ್ತದೆ. ಅದನ್ನು ನೀಡಿ ಲಾಗಿನ್ ಆಗಬೇಕು. ಈಗ ವಿವರಗಳನ್ನು ಭರ್ತಿ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸೂಚಿಸಿದ ವಿವರಗಳನ್ನು ತುಂಬಬೇಕು. ಆಧಾರ್ ನಲ್ಲಿರುವ ಹೆಸರು ಮತ್ತು ಆರ್ಟಿಸಿಯಲ್ಲಿರುವ ಹೆಸರು ಹೊಂದಾಣಿಕೆಯಾಗಬೇಕು. ಮುಂದುವರಿಯಲು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈಗ ಅರ್ಜಿಯ ವಿವರಗಳು ಸೇವ್ ಆಗಿ ಮುಂದಿನ ವಿಭಾಗಕ್ಕೆ ತೆರಳಲಾಗುತ್ತದೆ.