ಬೆಂಗಳೂರು: ಪುನೀತ್ ನಮ್ಮೆಲ್ಲರನ್ನು ಅಗಲಿ 10 ತಿಂಗಳಾಗುತ್ತಾ ಬಂದ್ರು ಇನ್ನೂ ಕೂಡ ಅಭಿಮಾನಿಗಳ ಅಭಿಮಾನ ಕಮ್ಮಿಯಾಗಿಲ್ಲ. ಪ್ರತಿ ದಿನ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಪ್ರತಿ ವಿಶೇಷ ಸಂದರ್ಭದಲ್ಲೂ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ.
ಈಗ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲೂ ಅದು ಮರುಕಳಿಸಿದೆ. ಮಾರುಕಟ್ಟೆಯಲ್ಲಿ ಪುನೀತ್ ರಾಜ್ಕುಮಾರ್ ಫೋಟೋ ಇರುವ ಅಪ್ಪು ರಾಖಿ ಲಭ್ಯವಾಗುತ್ತಿದೆ. ಇದನ್ನು ಖರೀದಿಸಲು ಜನರು ಆಸಕ್ತಿ ತೋರಿಸುತ್ತಿದ್ದಾರೆ.
ಆಗಸ್ಟ್ 11ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಸಹೋದರ-ಸಹೋದರಿಯರ ನಡುವಿನ ಈ ಬಾಂಧವ್ಯದ ಹಬ್ಬಕ್ಕೆ ವಿಶೇಷ ಸ್ಥಾನ ಇದೆ. ಬಗೆಬಗೆಯ ರಾಖಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಸಿಂಪಲ್ ರಾಖಿಯಿಂದ ದುಬಾರಿ ರಾಖಿವರೆಗೆ ಹಲವು ಡಿಸೈನ್ಗಳು ರಾರಾಜಿಸುತ್ತವೆ. ಅವುಗಳ ಜೊತೆಗೆ ಈ ಬಾರಿ ‘ಅಪ್ಪು ರಾಖಿ’ ಕೂಡ ಜನರನ್ನು ಸೆಳೆಯುತ್ತಿದೆ.
ಕೊಪ್ಪಳ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಪುನೀತ್ ರಾಜ್ಕುಮಾರ್ ಫೋಟೋ ಇರುವ ರಾಖಿಗಳನ್ನು ತಯಾರಿಸಲಾಗಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಜನರು ಇವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಆ ಮೂಲಕ ರಕ್ಷಾ ಬಂಧನ ಹಬ್ಬಕ್ಕೆ ‘ಪವರ್ ಸ್ಟಾರ್’ ಅಭಿಮಾನಿಗಳಿಂದ ವಿಶೇಷ ಕಳೆ ಬರುತ್ತಿದೆ. ಸಿನಿಮಾ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳಿಂದ ಪುನೀತ್ ಅವರು ಜನಮನ ಗೆದ್ದಿದ್ದರು. ಆ ಕಾರಣದಿಂದ ಅವರು ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ.