ಕಾರ್ಕಳ: ಇಲ್ಲಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಸೂರ್ಯಂತೊಕ್ಲು ಶಾಲೆ ಬಳಿಯ ಮನೆಯೊಂದಕ್ಕೆ ನಿನ್ನೆ ರಾತ್ರಿ ನುಗ್ಗಿದ ದುಷ್ಕರ್ಮಿಗಳು 8 ಲಕ್ಷ 75 ಸಾವಿರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ನಡೆದಿದೆ.
ಚೆನ್ನಪ್ಪ ಎಂಬವರು ಪತ್ನಿ ಜೊತೆ ಸಂಜೆ ಮನೆಗೆ ಬೀಗ ಹಾಕಿ ಮಾಳದಲ್ಲಿರುವ ಪತ್ನಿ ಮನೆಗೆ ಹೋಗಿದ್ದು ಇಂದು ಬೆಳಗ್ಗೆ 7 ಗಂಟೆಗೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದು ನುಗ್ಗಿದ ಕಳ್ಳರು, ಕೋಣೆಯಲ್ಲಿದ್ದ ಕವಾಟಿನ ಬಾಗಿಲು ಮುರಿದು 6 ಪವನ್ ತೂಕದ ಕರಿಮಣಿ ಸರ, 5 ಪವನ್ ತೂಕದ ಹವಳದ ಚೈನ್, 2 ಪವನ್ ತೂಕದ 2 ಜೊತೆ ಉಂಗುರ, 4 ಪವನ್ ತೂಕದ ಬ್ರಾಸ್ ಲೆಟ್, 4 ಪವನ್ ತೂಕದ ಚೈನ್, ಒಂದು ಪವನ್ ತೂಕದ ಒಂದು ಜೊತೆ ಉಂಗುರ, 2 ಪವನ್ ತೂಕದ ಎರಡು ಜೊತೆ ಕಿವಿಯೋಲೆ ಹಾಗೂ ಸೂಟ್ ಕೇಸಿನ ಒಳಗೆ ಇಟ್ಟಿದ್ದ 1 ಪವನ್ ತೂಕದ ಒಂದು ಜೊತೆ ಉಂಗುರ ಮತ್ತು 75,೦೦೦ರೂ. ನಗದು ಕಳವು ಮಾಡಿದ್ದಾರೆ.
ಕಳವಾಗಿರುವ ಸುಮಾರು 200 ಗ್ರಾಂ ಚಿನ್ನದ ಮೌಲ್ಯ 8 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.