ಮಂಗಳೂರು: ಡಿಜಿಟಲ್ ಇಂಡಿಯಾ: ಪ್ರಗತಿ, ಹೊಸ ಉಪಕ್ರಮಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಇಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉದ್ಘಾಟನೆಗೊಂಡಿತು.
ಮಂಗಳೂರು ವಿವಿಯ ವಾಣಿಜ್ಯ ವಿಭಾಗದಿಂದ ಐಸಿಎಸ್ ಎಸ್ ಆರ್ ಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿರುವ ವಿಚಾರ ಸಂಕಿರಣವನ್ನು ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗದ ಜಂಟಿ ಆಯುಕ್ತ ಡಾ. ರಾಜಶೇಖರ ಹೆಬ್ಬಾರ್ ಉದ್ಘಾಟಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಡಾ. ರಾಜಶೇಖರ ಹೆಬ್ಬಾರ್, ಉತ್ತಮ ಸಮಾಜದ ನಿರ್ಮಾಣಕ್ಕೆ ಮೌಲ್ಯಾಧಾರಿತ ಡಿಜಿಟಲೀಕರಣದ ಅವಶ್ಯಕತೆ ಇದೆ ಎಂದು ಹೇಳಿದರು.
ವಿಚಾರ ಸಂಕಿರಣದ ಮುಖ್ಯ ಅತಿಥಿಗಳಾಗಿ ಇನ್ ಫೋಸಿಸ್ ಬೆಂಗಳೂರು ಕ್ಯಾಂಪಸ್ ನ ಸಹಾಯಕ ಉಪಾಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ರವಿಶಂಕರ್, ಮುಖ್ಯ ಭಾಷಣಕಾರರಾಗಿ ರಿಲಾಕ್ಸೋ ಫೂಟ್ ವೇರ್ ನವದೆಹಲಿಯ ಪ್ರಾದೇಶಿಕ ಮಾರ್ಕೆಟಿಂಗ್ ಮ್ಯಾನೇಜರ್ ಉಮೇಶ್ ನಾಯಕ್ ಪಾಲ್ಗೊಂಡಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದ ಸಂಯೋಜಕ ಪ್ರೊ. ಈಶ್ವರ ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಾಣಿಜ್ಯ ವಿಭಾಗದ ಡೀನ್ ಪ್ರೊ. ವೈ. ಮುನಿರಾಜು, ಪ್ರಾಧ್ಯಾಪಕರಾದ ಡಾ. ವೇದವ ಪಿ., ಡಾ. ಪ್ರೀತಿ ಕೀರ್ತಿ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.