ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ಗಳ ಒಕ್ಕೂಟಕ್ಕೆ 34,615 ಕೋಟಿ ರೂ.ಗೆ ವಂಚಿಸಿದ ಸಂಬಂಧ ಡಿಎಚ್ಎಫ್ಎಲ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ವಿರುದ್ಧ ಸಿಬಿಐ ಹೊಸ ಪ್ರಕರಣವನ್ನು ದಾಖಲಿಸಿದೆ.ಇದು ಸಿಬಿಐ ದಾಖಲಿಸಿರುವ ಅತಿ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣವಾಗಿದೆ. ಇತ್ತೀಚೆಗೆ ಸಂಸ್ಥೆಯು ಎಬಿಜಿ ಶಿಪ್ಯಾರ್ಡ್ ವಿರುದ್ಧ 22,842 ಕೋಟಿ ರೂ. ವಂಚನೆ ಪ್ರಕರಣ ದಾಖಲಿಸಿತ್ತು. ಮುಂಬೈನಲ್ಲಿ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದ 12 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ ಎಂದು ಸಂಸ್ಥೆ ಹೇಳಿದೆ.
ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಎಚ್ಎಫ್ಎಲ್)ನ ಆಗಿನ ಸಿಎಂಡಿ ಕಪಿಲ್ ವಾಧವನ್, ನಿರ್ದೇಶಕ ಧೀರಜ್ ವಾಧವನ್ ಮತ್ತು ಆರು ರಿಯಾಲ್ಟರ್ ಕಂಪನಿಗಳ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ಗಳ ಒಕ್ಕೂಟಕ್ಕೆ 34,615 ಕೋಟಿ ರೂ. ವಂಚಿಸುವ ಕ್ರಿಮಿನಲ್ ಪಿತೂರಿಯ ಭಾಗವಾದ ಆರೋಪದ ಮೇಲೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2021ರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು, ಯೂನಿಯನ್ ಬ್ಯಾಂಕ್ ಆಫ್ ನೇತೃತ್ವದ ಬ್ಯಾಂಕ್ಗಳ ಒಕ್ಕೂಟಕ್ಕೆ 40,623.36 ಕೋಟಿ ರೂ. (ಜುಲೈ 30, 2020ರಂತೆ) ನಷ್ಟವನ್ನು ಉಂಟುಮಾಡಿದ ಆರೋಪದ ಮೇಲೆ ಡಿಎಚ್ಎಫ್ಎಲ್ನ ಪ್ರವರ್ತಕರು ಮತ್ತು ಹಿಂದಿನ ಮ್ಯಾನೇಜ್ಮೆಂಟ್ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಪತ್ರ ಬರೆದಿತ್ತು.
ಬ್ಯಾಂಕ್ ತನ್ನ ದೂರಿನಲ್ಲಿ, “ನಿಗದಿತ ನಿಯಮಗಳು ಮತ್ತು ಕಾರ್ಯವಿಧಾನಗಳ ವಿಷಯಾಂತರ, ಖಾತೆಗಳ ತಿರುಚುವಿಕೆ, ಮರೆಮಾಚುವಿಕೆ, ಬಹಿರಂಗಪಡಿಸದ ಬ್ಯಾಂಕ್ ಖಾತೆಗಳು ಮತ್ತು ತಪ್ಪು ನಿರೂಪಣೆ,” ಆರೋಪಗಳನ್ನು ಮಾಡಿತ್ತು. ಆಡಿಟ್ ಸಂಸ್ಥೆಯಾದ ಕೆಪಿಎಂಜಿಯ ಪ್ರಾಥಮಿಕ ತನಿಖೆಯಿಂದ ಪತ್ತೆ ಹಚ್ಚಿರು ಅಂಶಗಳನ್ನು ಉಲ್ಲೇಖಿಸಿ ಈ ದೂರು ಸಲ್ಲಿಸಿತ್ತು.
ಫೆಬ್ರವರಿ 11, 2022 ರಂದು ಬ್ಯಾಂಕ್ನಿಂದ ಬಂದ ದೂರಿನ ಮೇರೆಗೆ ತನಿಖಾ ಸಂಸ್ಥೆಯು ಕ್ರಮ ಕೈಗೊಂಡಿದೆ ಎಂದು ಸಿಬಿಐ ಹೇಳಿದೆ.ಡಿಎಚ್ಎಫ್ಎಲ್ನ ಹಿಂದಿನ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಅವರು ಯೆಸ್ ಬ್ಯಾಂಕ್ಗೆ ಉಂಟುಮಾಡಿದ ಇನ್ನೊಂದು ವಂಚನೆ ಪ್ರಕರಣದಲ್ಲಿ ಪ್ರಸ್ತುತ ಜೈಲಿನಲ್ಲಿದ್ದಾರೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣಗಳಲ್ಲಿ ಬ್ಯಾಂಕ್ನ ಸಹಸಂಸ್ಥಾಪಕ ರಾಣಾ ಕಪೂರ್ ಅವರ ಸಹಕಾರದೊಂದಿಗೆ ವಂಚನೆ ಎಸಗಿದ ಆರೋಪ ಇವರ ಮೇಲಿದೆ. ಇವರು ಮುಂಬೈನ ಹೊರವಲಯದಲ್ಲಿರುವ ತಲೋಜಾ ಜೈಲಿನಲ್ಲಿದ್ದಾರೆ. ಸೆಪ್ಟೆಂಬರ್ನಲ್ಲಿ ಪಿರಮಲ್ ಕ್ಯಾಪಿಟಲ್ ಅಂಡ್ ಹೌಸಿಂಗ್ ಫೈನಾನ್ಸ್ (ಪಿಸಿಎಚ್ಎಫ್) 34,250 ಕೋಟಿ ರೂ.ಗೆ ಡಿಎಚ್ಎಫ್ಎಲ್ನ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಪೂರ್ಣಗೊಳಿಸಿತು. ಇದರಲ್ಲಿ ನಗದು ಘಟಕ ಮತ್ತು ಪರಿವರ್ತಿಸಲಾಗದ ಡಿಬೆಂಚರ್ಗಳೂ ಸೇರಿವೆ.


