ಕಾರ್ಕಳ : ಮದುವೆ ಅಂದ್ರೆ ಸಾಕು ಹೆಚ್ಚಿನವರು ನಮ್ಮ ಮದುವೆ ಅವರ ಮ್ಯಾರೇಜ್ ಗಿಂತ ಗ್ರ್ಯಾಂಡ್ ಆಗ್ಬೇಕು. ಇವರ ವಿವಾಹಗಿಂತ ಗ್ರ್ಯಾಂಡ್ ಆಗ್ಬೇಕು ಅಂತಾ ಧಾಮ್ ಧೂಮ್ ಅಂತಾ ಮಾಡೋರೇ ಹೆಚ್ಚು.
ಆದ್ರೆ ಕಾರ್ಕಳದ ಯುವಕನೊಬ್ಬ ಸರಳವಾಗಿ ವಿವಾಹವಾಗಿ ಮದುವೆಗಾಗಿ ಖರ್ಚು ಮಾಡುವ ಹಣವನ್ನು ಬಡವರಿಗೆ ಹಂಚಿ ಶ್ರೀಮಂತರಾಗಿದ್ದಾರೆ.
ಕಾರ್ಕಳ ಕನ್ನಡಿಬೆಟ್ಟು ತೆಲ್ಲಾರ್ ನಿವಾಸಿ ದಿ. ಶಂಕರ್ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ದಂಪತಿ ಪುತ್ರ ಸುಕೇಶ್ ಶೆಟ್ಟಿ ಮುಂಬೈಯಲ್ಲಿ ಉದ್ಯಮಿಯಾಗಿದ್ದು, ಅವರ ಮದುವೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನಡೆದಿದೆ. ಸರಳ ಮದುವೆಯಾಗುವ ಮೂಲಕ ಮದುವೆಗಾಗುವ ಖರ್ಚನ್ನು ಉಳಿತಾಯ ಮಾಡಿ ಬಡವರಿಗೆ, ಸಮಸ್ಯೆಯಲ್ಲಿರುವವರಿಗೆ ಹಂಚಿದ್ದಾರೆ. ಮದುವೆ ದಿನದಂದೇ 10 ಲಕ್ಷ ರೂ.ಗಳನ್ನು ಈ ಕಾರ್ಯಕ್ಕೆ ಬಳಸುವ ಮೂಲಕ ಮಾದರಿಯಾಗಿದ್ದಾರೆ. ಸುಕೇಶ್ ಅವರ ಈ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಿವುಡುತನ ಸಮಸ್ಯೆ, ಶ್ರವಣ ಸಮಸ್ಯೆ, ಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡವರಿಗೆ ಕೃತಕ ಕಾಲು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹಣಕಾಸಿನ ನೆರವು ನೀಡಿದ್ದಾರೆ. ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿರುವ ಹೊಟೇಲ್ ಕಾರ್ಮಿಕರೊಬ್ಬರ ಆರು ವರ್ಷದ ಮಗುವಿಗೆ ಮತ್ತು ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ವರಿಗೂ ಆರ್ಥಿಕ ನೆರವು ನೀಡಿದ್ದಾರೆ. ಸಾಕುದನ ಕಳವಾಗಿ ನೊಂದಿದ್ದ ಮಹಿಳೆಯೊಬ್ಬರಿಗೆ ದನಗಳನ್ನು ಕೂಡಾ ದಾನ ಮಾಡಿದ್ದಾರೆ. ಅಗ್ನಿ ಅವಘಡದಿಂದ ಮನೆ ಕಳೆದುಕೊಂಡವರಿಗೆ ಆರ್ಥಿಕ ನೆರವು, ತಂದೆಯಿಲ್ಲದ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ, ಮನೆ ರಿಪೇರಿಗಾಗಿ ಧನಸಹಾಯ. ಮನೆ ನಿರ್ಮಾಣಕ್ಕೆ ಧನಸಹಾಯ, ಸ್ವಂತ ಮನೆ ಹೊಂದಿಲ್ಲದ ಮಹಿಳೆಯೊಬ್ಬರಿಗೆ ಆರ್ಥಿಕ ನೆರವು, ಕ್ಯಾನ್ಸರ್ನಿಂದ ಮೃತಪಟ್ಟವರ ಕುಟುಂಬಕ್ಕೆ ಧನಸಹಾಯ, ಹಿರಿಯ ನಾಗರಿಕ ರಿಗೆ ಧನ ಸಹಾಯ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಧನ ಮಾಡಿ ತಾನೇ ನಿಜವಾದ ಶ್ರೀಮಂತ ಅನ್ನೋದನ್ನು ತೋರಿಸಿದ್ದಾರೆ.