ಮಂಗಳೂರು: ಭಾರತಕ್ಕೆ ವಿಶ್ವಗುರುವಿನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ದೃಢ ಹೆಜ್ಜೆ ಇಡಬೇಕು. ಇದಕ್ಕೆ ಯುವಕರು ಕೈಜೋಡಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಮಂಗಳೂರಿನ ಕೊಣಾಜೆಯಲ್ಲಿರುವ ಮಂಗಳ ಗಂಗೋತ್ರಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ 40ನೇ ವಾರ್ಷಿಕ ಘಟಿಕೋತ್ಸಕ್ಕೆ ರಾಜ್ಯಪಾಲರು ಹಾಗೂ ಕುಲಧಿಪತಿಗಳೂ ಆದ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿ ಮಾತನಾಡಿದರು.
ದೇಶದಾದ್ಯಂತ ಸಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. 25 ವರ್ಷಗಳ ನಂತರ ಸ್ವಾತಂತ್ರ್ಯದ ಸುವರ್ಣ ಮಹೋತ್ಸವನ್ನು ಆಚರಿಸಲಾಗುತ್ತಿದೆ. ಇಂದಿನ ಯುವಕರು ಇದಕ್ಕೆ ಪ್ರತ್ಯಕ್ಷದರ್ಶಿಗಳಾಗಿರುತ್ತಾರೆ. ಸ್ವರ್ಣ, ಸರ್ವೋಪರಿ ಮತ್ತು ವಿಶ್ವದ ಶ್ರೇಷ್ಠ ದೇಶ ಭಾರತವಾಗಿದೆ. ಮತ್ತೆ ಭಾರತವನ್ನು ವಿಶ್ವಗುರವನ್ನಾಗಿಸಲು ದೃಢ ಹೆಜ್ಜೆ ಇಡಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ.
ಶ್ರೀಮತಿ ಹೇಮಾವತಿ ಹೆಗಡೆ ಶಿಕ್ಷಣ ಮತ್ತು ಮಾನವಿಕ ಕ್ಷೇತ್ರದಲ್ಲಿ ಅವರ ಅಭೂತಪೂರ್ವ ಕೊಡುಗೆಗಾಗಿ, ಹರಿಕೃಷ್ಣ ಪುನರೂರು ಅವರಿಗೆ ಸಾಹಿತ್ಯ ಮತ್ತು ಸಾಮಾಜಿಕ ಸೇವೆಗಳಲ್ಲಿ ಗಮನಾರ್ಹ ಕೆಲಸಕ್ಕೆ ಮತ್ತು ಲಲಿತಕಲೆ ಕ್ಷೇತ್ರದಲ್ಲಿ ವಿಶೇಷವಾಗಿ ತುಳು ನಾಟಕ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅವರ ಅಮೂಲ್ಯ ಕೊಡುಗೆಗಾಗಿ ದೇವದಾಸ್ ಕಾಪಿಕಾಡ್ ಅವರಿಗೆ ಗೌರವ ಪದವಿ ನೀಡಿ ಗೌರವಿಸಲಾಗಿದೆ. ಈ ಸಾಧಕರಿಗೆ ನನ್ನ ಶುಭ ಹಾರೈಕೆಗಳು ಹಾಗೂ ಇದೇ ರೀತಿ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಯುವಕರಿಗೆ ಸ್ಪೂರ್ತಿಯಾಗಿರಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟೀಸ್ ಎಸ್. ಅಬ್ದುಲ್ ನಝೀರ್, ವಿವಿ ಕುಲಪತಿ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹಾಗೂ ಇತರೆ ಗಣ್ಯರು ಭಾಗವಹಿಸಿದ್ದರು.