ಪುತ್ತೂರು: ಕೃಷಿಕ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಅಘಾತಕಾರಿ ಘಟನೆ ಅ. 18 ರಂದು ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶವಾದ ಬಡಗನ್ನೂರು ಎಂಬಲ್ಲಿ ಬೆಳಕಿಗೆ ಬಂದಿದೆ.
ಬಡಗನ್ನೂರಿನ ಪಾದೆಕರ್ಯ ನಿವಾಸಿ ಸುಬ್ರಹ್ಮಣ್ಯ ಭಟ್(65 ವ) ಹಾಗೂ ಶಾರದಾ(60 ವ) ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು. ಮನೆಯ ಕೊಠಡಿಯಲ್ಲಿ ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಮಕ್ಕಳು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಿಗೆ ಆಸ್ತಿ ಹಂಚಿಕೆ ಆದ ಮೇಲೆ ಇನ್ನು ಆಸರೆಯಾಗಿ ಯಾರು ಇಲ್ಲ ಎಂಬ ಭಯದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಸುಬ್ರಹ್ಮಣ್ಯ ಭಟ್ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡವರಾಗಿದ್ದು ಅಂಬಟೆಮೂಲೆಯಲ್ಲಿ ಸತ್ಯನಾರಯಣ ಪೂಜಾ ಸಮಿತಿಯನ್ನು ಸ್ಥಾಪಿಸಲು ಕಾರಣೀಕರ್ತರಾಗಿದ್ದರು. ಸ್ಥಳೀಯವಾಗಿ ಜನಾನುರಾಗಿಯಾಗಿದ್ದು, ಗ್ರಾಮದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.ಘಟನಾ ಸ್ಥಳಕ್ಕೆ ಪುತ್ತೂರು ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.