ಮಂಗಳೂರು : ಮುಲ್ಕಿ ಮೂಲದ ಉದ್ಯಮಿಯೊಬ್ಬರಿಗೆ ಭೂಗತ ಪಾತಕಿ ಕಲಿ ಯೋಗೀಶ ಎನ್ನಲಾದ ವ್ಯಕ್ತಿ ಎರಡನೇ ಬಾರಿ ಕರೆ ಮಾಡಿ, ಜೀವ ಬೆದರಿಕೆ ಒಡ್ಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಹಾರ್ಡ್ ವೇರ್ ವ್ಯವಹಾರ ಹೊಂದಿರುವ ನಾಗರಾಜ್ ಎಂಬವರಿಗೆ ಹಫ್ತಾಕ್ಕಾಗಿ ಜೀವ ಬೆದರಿಕೆ ಒಡ್ಡಲಾಗಿದ್ದು, ಹಣ ನೀಡುವಂತೆ ಒತ್ತಾಯಿಸಿ, ಬೆದರಿಕೆ ಹಾಕಿದ್ದಾರೆ. ನಾಗರಾಜ್ ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾಗರಾಜ್, ಕಾಂಕ್ರೀಟ್ ಮತ್ತು ಪೈಪ್ ಇನ್ನಿತರ ಬಿಸಿನೆಸ್ ನಡೆಸಿಕೊಂಡಿದ್ದು, ಕಳೆದ 2017 ರಲ್ಲಿಯೂ ಕಲಿ ಯೋಗೇಶ ಇದೇ ರೀತಿ ಇಂಟರ್ನೆಟ್ ಕರೆ ಮಾಡಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಆನಂತರ ಎರಡು ದಿನಗಳ ಬಳಿಕ ಬೈಕಿನಲ್ಲಿ ಬಂದಿದ್ದ ಇಬ್ಬರು ಆಗಂತುಕರು ನಾಗರಾಜ್ ಅವರ ಹಾರ್ಡ್ ವೇರ್ ಶಾಪ್ ಮೇಲೆ ಫೈರ್ ಮಾಡಿ ಹೋಗಿದ್ದರು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಮೂಲತಃ ಹಳೆಯಂಗಡಿ ನಿವಾಸಿಯಾಗಿರುವ ಕಲಿ ಯೋಗೀಶ ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದು ವಿದೇಶದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ. ಈ ಹಿಂದೆ ಮುಲ್ಕಿ ಠಾಣೆಯಲ್ಲಿ ಆತನ ವಿರುದ್ಧ ವಂಚನೆ, ಸುಲಿಗೆ, ಬೆದರಿಕೆ ವಿಚಾರದಲ್ಲಿ ಪ್ರಕರಣ ದಾಖಲಾಗಿತ್ತು.